ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ತಡರಾತ್ರಿ ಬಂಧಿಸಿ ಅವರನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಹಾಗಾಗಿ ಶ್ರೀಗಳನ್ನು ಚಿತ್ರದುರ್ಗದ ಸೆಂಟ್ರಲ್ ಜೈಲಿನಲ್ಲಿರಿಸಲಾಗಿತ್ತು. ಜೈಲಿನಲ್ಲಿರುವಾಗಲೇ ಇಂದು ಬೆಳಗ್ಗೆ ಶ್ರೀಗಳಿಗೆ ಎದೆನೋವು ಬಂದಿದ್ದು ಅಲ್ಲಿಯೇ ಕುಸಿದುಬಿದ್ದಿದ್ದಾರೆ.
ಕೂಡಲೇ ಅವರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಬಿಪಿ, ಶುಗರ್, ಇಸಿಜಿ, ಸಿಟಿ ಸ್ಕ್ಯಾನ್ ಮಾಡಿರುವುದಾಗಿ ಜಿಲ್ಲಾ ವೈದ್ಯ ಸರ್ಜನ್ ಡಾ.ಬಸವರಾಜ್ ತಿಳಿಸಿದರು. ಎದೆ ನೋವು ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ICU ಗೆ ಶಿಫ್ಟ್ ಮಾಡಬೇಕಾಯಿತು ಎಂದು ವೈದ್ಯರು ಮಾಹಿತಿ ನೀಡಿದರು. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಇಬ್ಬರು ಹೃದಯ ರೋಗ ತಜ್ಞ ವೈದ್ಯರ ತಂಡವನ್ನು ಕರೆಸಲಾಗುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಅವರು ಇಲ್ಲಿಗೆ ಬಂದು ಮುರುಘಾ ಶ್ರೀಗಳನ್ನು ತಪಾಸಣೆ ಮಾಡಲಿದ್ದಾರೆ ಎಂದು ಜಿಲ್ಲಾ ಸರ್ಜನ್ ಮಾಹಿತಿ ನೀಡಿದ್ದಾರೆ.
ನುರಿತ ಹೃದ್ರೋಗ ವೈದ್ಯರ ಸೂಚನೆ ಮೇರೆಗೆ ಶ್ರೀಗಳಿಗೆ ಮುಂದಿನ ಚಿಕಿತ್ಸೆ ಯಾವ ರೀತಿ ನೀಡಬೇಕು? ಬೇರೆ ಆಸ್ಪತ್ರೆಗೆ ರವಾನಿಸಬೇಕಾ? ಬೆಂಗಳೂರಿಗೆ ಕರೆದೊಯ್ಯಬೇಕಾ? ಎಂಬುದರ ಬಗ್ಗೆ ತೀರ್ಮಾನಿಸಲಾಗವುವುದು ಎಂದರು. ಈ ನಡುವೆ ಶ್ರೀಗಳಿಗೆ ಹೃದಯ ರೋಗದ ಸಮಸ್ಯೆ ಇತ್ತು ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.