ಹೊಸದಿಗಂತ ಆನ್ ಲೈನ್ ಡೆಸ್ಕ್:
ಬೈ ಎಲೆಕ್ಷನ್ ಬಗ್ಗೆ ಚಿಂತಿಸುತ್ತಿರುವ ಸರ್ಕಾರಕ್ಕೆ ಸಾರಿಗೆ ನೌಕರರ ಸಮಸ್ಯೆಗಳು ಕಾಣುತ್ತಿಲ್ಲ. ಇಂತಹ ಸರ್ಕಾರ ಇರುವುದು ಈ ರಾಜ್ಯದ ಜನರ ದುರಂತ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.
ಸಾರಿಗೆ ನೌಕರರ ಕೂಟ ಹಾಗೂ ಇತರೆ ಟ್ರೇಡ್ ಯೂನಿಯನ್ಗಳ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರು ಯುಗಾದಿ ಹಬ್ಬ ಮಾಡೋ ಹಾಗಿಲ್ಲ, ಇದನ್ನು ಹೇಳಿದ್ರೆ ಎಸ್ಮಾ ಹಾಕ್ತೀನಿ ಎನ್ನುತ್ತದೆ ಸರ್ಕಾರ. ನಾಳೆ ಸಾರಿಗೆ ನೌಕರರ ಕುಟುಂಬದವರಿಂದ ವಿಭಿನ್ನ ಚಳುವಳಿ ಮಾಡಿಸುತ್ತೇವೆ. ನೌಕರರ ಕಷ್ಟ ನಿಮಗೆ ಅರ್ಥ ಆಗ್ತಾಯಿಲ್ವಾ ಮಿನಿಸ್ಟರ್ ಸವದಿ ಅವರೇ? ಹಬ್ಬದ ಒಳಗೆ ಇದನ್ನು ಇತ್ಯರ್ಥ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಮುಷ್ಕರ ಅನಿರ್ದಿಷ್ಟಾವಧಿ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಕೊಟ್ಟ ಮಾತು ಜಾರಿ ಮಾಡದೆ ತಪ್ಪು ಮಾಡುತ್ತಿದೆ. ಕಳೆದ ಮಾರ್ಚ್ 16 ರಂದು ನೋಟೀಸ್ ನೀಡಿದ್ದೆವು, ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿದ್ದೆವು. ಆದರೆ ಸರ್ಕಾರದ ಮಾತುಕತೆ ವಿಫಲವಾದ ಬಳಿಕ ನಾವು ಚಳವಳಿಗಳನ್ನ ಆರಂಭಿಸಿದ್ದೇವೆ. ಮುಖ್ಯಮಂತ್ರಿಗಳು, ಸಚಿವರುಗಳಾರೂ ನಮ್ಮನ್ನ ಮಾತುಕತೆಗೆ ಕರೆದಿಲ್ಲ. ಕಾರ್ಮಿಕ ಆಯುಕ್ತರು ಈ ಮುಷ್ಕರ ಮಾಡುತ್ತಿರುವುದು ಊರ್ಜಿತವಲ್ಲ ಎಂದು ಹೇಳುತ್ತಾರೆ. ಏಪ್ರಿಲ್ 7 ರಂದು ಈ ಮುಷ್ಕರ ಆರಂಭವಾಗಬೇಕಿತ್ತು, ಆದರೆ ಏಪ್ರಿಲ್ 6 ಮಧ್ಯಾಹ್ನವೇ ಆರಂಭವಾಗಿದೆ ಎಂಬ ಕಾರಣ ಕೊಡ್ತಾರೆ. ಮುಷ್ಕರ ಆರಂಭವಾಗಿ ಈಗಾಗಲೇ 5 ದಿನಗಳು ಕಳೆದಿವೆ, 6 ನೇ ದಿನವೂ ನಮ್ಮ ಮುಷ್ಕರ ಮುಂದುವರೆಯುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಐಎನ್ಟಿಯುಸಿ ಪ್ರಧಾನ ಕಾರ್ಯದರ್ಶಿ ಬೋರ್ ಶೆಟ್ಟಿ, ನಾಗರಾಜ್, ಕೆಬಿಎನ್ಎನ್ ಸಂಘಟನೆಗಳ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಯುನೈಟೆಡ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಡಿಸೋಜಾ, ಕೆಎಸ್ಆರ್ಟಿಸಿ, ಬಿಎಂಟಿಸಿ ಯುನೈಟೆಡ್ ಎಂಪ್ಲಾಯಿಸ್ ಅಸೋಸಿಯೇಷನ್ನ ಹರಿಶ್ ಪಿ ಗೌಡ, ನಾಲ್ಕು ನಿಗಮದ ಒಕ್ಕಲಿಗರ ಸಂಘದ ಅಧ್ಯಕ್ಷ ಮಹೇಶ್, ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್ – ನಾಲ್ಕು ನಿಗಮದ ಕುರುಬರ ಸಂಘದ ರಾಜ್ಯಾಧ್ಯಕ್ಷರು ಭಾಗಿಯಾಗಿದ್ದಾರೆ.