ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸೋಲಿನ ಹತಾಶೆಯಿಂದ ಕಾಂಗ್ರೆಸ್ ಕೀಳು ಮಟ್ಟದ ಮಾತುಗಳನ್ನು ಆಡುತ್ತಿದೆ. ನರೇಂದ್ರ ಮೋದಿ ಅವರಿಗೆ ಪ್ರಿಯಾಂಕಾ ಖರ್ಗೆ ಅವರು ನಾಲಾಯಕ್ ಎಂದಿದ್ದಾರೆ. ಅವರನ್ನು ನೀವು ಕ್ಷಮಿಸುತ್ತಿರಾ? ಅವರಿಗೆ ತಕ್ಕ ಪಾಠವನ್ನು ಕಲಿಸಲು ಬಿಜೆಪಿಗೆ ಮತ ನೀಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮೈಸೂರಿನ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಶ್ರೀವತ್ಸ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಈ ನಗರದಲ್ಲಿ ಕಳೆದ ಮೂರು ದಶಕಗಳಿಂದ ಬಿಜೆಪಿಯ ಪ್ರಾಬಲ್ಯವಿದೆ. ಇಲ್ಲಿಂದ ಶಾಸಕರು, ಸಂಸದರ ಆಯ್ಕೆ ಮಾಡಿದ್ದೀರಿ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಸೇರಿರುವುದನ್ನು ನೋಡಿದರೆ, ಇಲ್ಲಿ ಶ್ರೀವತ್ಸ ಅವರು ಅತ್ಯಧಿಕ ಮತದಿಂದ ಆಯ್ಕೆ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಸೋಲಿನ ಹತಾಶೆಯಿಂದ ಕೀಳು ಮಟ್ಟದ ಮಾತುಗಳನ್ನು ಕಾಂಗ್ರೆಸ್ ಆಡುತ್ತಿದೆ. ನರೇಂದ್ರ ಮೋದಿಯವರಿಗೆ ಪ್ರಿಯಾಂಕಾ ಖರ್ಗೆ ಅವರು ನಾಲಾಯಕ್ ಎಂದಿದ್ದಾರೆ. ಅವರನ್ನು ನೀವು ಕ್ಷಮಿಸುತ್ತಿರಾ? ಅವರಿಗೆ ತಕ್ಕ ಪಾಠವನ್ನು ಕಲಿಸಲು ಶ್ರೀವತ್ಸ ಅವರಿಗೆ 25 ಸಾವಿರ ಮತ ಕೊಟ್ಟು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ನಾವು ನಮ್ಮ ಡಬಲ್ ಇಂಜಿನ್ ಸರ್ಕಾರದ ಕಾರ್ಯಕ್ರಮಗಳ ಮೂಲಕ ಸಕಾರಾತ್ಮಕ ಮತಗಳ ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ವಿರೋಧ ಪಕ್ಷ ತಳಮಟ್ಟದ ಮಾತುಗಳನ್ನಾಡಿ, ಹತಾಶರಾಗಿ ನಕಾರಾತ್ಮಕ ಚುನಾವಣೆ ಮಾಡುತ್ತಿದ್ದಾರೆ. ಯಾರು ಕೆಲಸ ಮಾಡಿದ್ದಾರೆ ಅವರಿಗೆ ಜನರು ಬೆಂಬಲ ಕೊಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಹತಾಶೆಗೊಂಡು ಹತ್ತು ಕೆ.ಜಿ ಅಕ್ಕಿ ಕೊಡುವ ಗ್ಯಾರೆಂಟಿ ಕೊಡುತ್ತಿದ್ದಾರೆ. 2013 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ 10 ಕೆ.ಜಿ ಅಕ್ಕಿ ಕೊಡುತ್ತಿದ್ದೇವು. ಇವರು ಅಧಿಕಾರಕ್ಕೆ ಬಂದ ಮೇಲೆ 5 ಕೆ.ಜಿ ಗೆ ಇಳಿಸಿದರು. ಕಾಂಗ್ರೆಸ್ ಚುನಾವಣೆಗಾಗಿ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ. ಇವತ್ತು ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಆಯುಷ್ಮಾನ್ ಯೋಜನೆಯ ವಿಮೆ ಹಣ 5 ಲಕ್ಷ ರೂ ಇರುವುದನ್ನು 10 ಲಕ್ಷ ರೂ ಹೆಚ್ಚಳ ಮಾಡಿದ್ದೇವೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟಲು ನೀಡಲಾಗುತ್ತಿದ್ದ 2 ಲಕ್ಷ ರೂ. ವನ್ನು 5 ಲಕ್ಷಕ್ಕೆ ಹೆಚ್ಚಿಸುತ್ತಿದ್ದೇವೆ. ಕಾಂಗ್ರೆಸ್ ನವರು ಸುಳ್ಳು ಹೇಳಿ, ರಾಜ್ಯವನ್ನು ದಿವಾಳಿ ಮಾಡುತ್ತಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದರು.