ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿಗೆ ಶಿವಸೇನೆ ಸರ್ಕಾರ ಶಾಕ್ ನೀಡಿದೆ. ಹನುಮಾನ್ ಚಾಲೀಸಾ ಪಠಣ ವಿವಾದದಲ್ಲಿ ಬಂಧಿಯಾಗಿ ಬಿಡುಗಡೆಯಾಗಿದ್ದವರಿಗೆ ಮತ್ತೊಂದು ಆಘಾತ ಎದುರಾಗಿದೆ. ಮುಂಬೈನ ಖೇರ್ ಪ್ರದೇಶದಲ್ಲಿರುವ ಮನೆಯನ್ನು ಅಕ್ರಮವಾಗಿ ನಿರ್ಮಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಒಂದು ವಾರದೊಳಗೆ ಮನೆ ತೆರವು ಮಾಡುವಂತೆ ಮುಂಬೈ ಮಹಾನಗರ ಪಾಲಿಕೆ(BMC) ಶನಿವಾರ ನಿರ್ದೇಶನ ನೀಡಿದೆ. ಒಂದು ವಾರದ ದಿನಲ್ಲಿ ತೆರವುಗೊಳಿಸದಿದ್ದಲ್ಲಿ ಪಾಲಿಕೆಯೇ ತೆರವು ಕಾರ್ಯ ಮಾಡುವುದಾಗು ಎಚ್ಚರಿಕೆ ನೀಡಿದ್ದಾರೆ.
ಆದೇಶ ಧಿಕ್ಕರಿಸಿದರೆ ಮನೆ ಮಾಲೀಕರು ಒಂದು ತಿಂಗಳ ಕಾಲ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ನವನೀತ್ ರಾಣಾ ದಂಪತಿಗೆ ಸೂಚಿಸಿದ್ದಾರೆ. ಎಲ್ಲಾ ನಿಯಮಗಳ ಪ್ರಕಾರವೇ ಮನೆ ಕಟ್ಟಿದ್ದೇವೆ ಎಂದು ರಾಣಾ ದಂಪತಿ ತೋರಿಸಿದ ದಾಖಲೆಗಳನ್ನು ಮುಂಬೈ ನಗರಾಡಳಿತ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಮನೆ ನಿರ್ಮಾಣದ ಬಗ್ಗೆ ಅಧಿಕಾರಿಗಳಿಂದ ಅನುಮತಿ, ಅನುಮೋದಿತ ಯೋಜನಾ ದಾಖಲೆಗಳನ್ನು ಸಲ್ಲಿಸುವಲ್ಲಿ ಮನೆ ಮಾಲೀಕ ವಿಫಲನಾಗಿದ್ದಾನೆ ಎಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ. ಇದನ್ನು ಕಾನೂನುಬಾಹಿರವೆಂದು ಪರಿಗಣಿಸಿ ಕೆಡವಲು ಆದೇಶಿಸಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ನವನೀತ್ ಕೌರ್ ದಂಪತಿ ಇತ್ತೀಚೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸುವಂತೆ ಸವಾಲು ಹಾಕಿದ್ದರು. ಈ ವಿವಾರವಾಗಿ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ಅನುಭವಿಸಿ ವಾಪಸಾಗಿದ್ದರು. ಅಂದಿನಿಂದ ಶಿವಸೇನೆ ಸರ್ಕಾರ ಮತ್ತು ನವನೀತ್ ರಾಣಾ ದಂಪತಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ.