ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತ ಹಾಗೂ ಚೀನಾ ನಡುವೆ ಯುದ್ಧ ಭೀತಿಯ ವಾತಾವರಣ ತಣ್ಣಗಾಗಿದ್ದು, ಇದರ ಮತ್ತೊಂದೆಡೆ ಗಡಿಯಲ್ಲಿ ತಂಟೆ ತೆಗೆಯುತ್ತಿದ್ದ ಪಾಕಿಸ್ತಾನ ಶಾಂತಿಯ ಮಂತ್ರ ಜಪಿಸುತ್ತಿದೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದೊಂದಿಗಿನ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ತಮ್ಮ ಮುಕ್ತ ಮಾತುಕತೆಯ ಪ್ರಸ್ತಾಪವನ್ನು ನವೀಕರಿಸಿದ್ದಾರೆ.ವಿವಾದಿತ ಎಲ್ಒಸಿ ಉದ್ದಕ್ಕೂ 2021ರ ಫೆಬ್ರವರಿ 25ರಿಂದ ಕದನ ವಿರಾಮ ಜಾರಿಗೆ ತರಲು ಉಭಯ ದೇಶಗಳ ಡೈರೆಕ್ಟರ್ ಜನರಲ್ ಫಾರ್ ಮಿಲಿಟರಿ ಆಪರೇಷನ್ಸ್ (ಡಿಜಿಎಂಒ) ಪರಸ್ಪರ ಒಪ್ಪಿಗೆ ಸೂಚಿಸಿದ ನಂತರ ಖಾನ್ ಅವರು, ಭಾರತಕ್ಕೆ ಮಾತುಕತೆಯ ಹೊಸ ಪ್ರಸ್ತಾಪ ಮುಂದಿಟ್ಟಿದ್ದಾರೆ.
ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಮತ್ತು ಪಾಕಿಸ್ತಾನದ ಗಡಿ ಭದ್ರತಾ ಪಡೆಗಳ ನಡುವೆ ಇತ್ತೀಚೆಗೆ ಘೋಷಿಸಲಾದ ಕದನ ವಿರಾಮವನ್ನು ಸ್ವಾಗತಿಸಿ ಅವರು ಈ ಹೇಳಿಕೆ ಹೇಳಿದ್ದಾರೆ. ಪಾಕಿಸ್ತಾನವು ಯಾವಾಗಲೂ ಶಾಂತಿಗಾಗಿ ಕೈಚಾಚಿ ನಿಂತಿದೆ. ಸಂಭಾಷಣೆಯ ಮೂಲಕ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮುಂದುವರಿಯಲು ಸಿದ್ಧವಾಗಿದೆ ಎಂದು ಹೇಳಿದರು.
ಮುಂದಿನ ಪ್ರಗತಿಗೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಭಾರತದ ಮೇಲಿದೆ ಎಂದರು.