ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಾದ್ಯಂತ ಮಳೆಯ ಅರ್ಭಟ ಮುಂದುವರಿದಿದ್ದು, ಬಂಟ್ವಾಳದಿಂದ ಹಾದುಹೋಗುವ ನೇತ್ರಾವತಿ ನದಿ ಸಂಜೆಯ ಹೊತ್ತಿಗೆ 7.2 ಮೀಟರ್ ಎತ್ತದರಲ್ಲಿ ಹರಿಯುತ್ತಿತ್ತು.
ಆದೇರೀತಿ ತಾಲೂಕಿನ ವಿವಿದೆಡೆಯಲ್ಲಿ ಹಾನಿ ಕೂಡ ಮುಂದುವರಿದಿದೆ.
ಕೊಯಿಲಗ್ರಾಮದ ಕೈತ್ರೋಡಿ ಎಂಬಲ್ಲಿ ಸರೋಜಿನಿಯವರ ಮನೆ ಭಾಗಶ: ಹಾನಿಯಾದರೆ,ವಿಟ್ಲಕಸಬಾ ಗ್ರಾಮದಲ್ಲಿ ಸರೋಜಿನಿ ಎಂಬವರ ಮನೆಗೆ ಕೂಡ ಭಾಗಶ: ಹಾನಿಯಾಗಿದೆ.ಸಜೀಪಮೂಡಗ್ರಾಮದಲ್ಲಿ ಸುಂದರಿಎಂಬವರಮನೆ ಹಾನಿಯಾಗಿದ್ದು,ಕೇಪುಗ್ರಾಮದ ಮೈರ ಎಂಬಲ್ಲಿ ಗಣೇಶ್ ಅವರ ಮನೆ ಹಿಂಭಾಗದಲ್ಲಿರುವ ಕೊಟ್ಟಿಗೆಗೆ ಹಾನಿಯಾಗಿದೆ.ಬಿಳಿಯೂರುಗ್ರಾಮದಲ್ಲಿ ನಸೀಮಾ ಎಂಬವರ ಮನೆ ಭಾಗಶ: ಹಾನಿಯಾಗಿದ್ದು,ಬಂಟ್ವಾಳಕಸ್ಬಾ ಗ್ರಾಮದಲ್ಲು ಅಪಗಪಿ ಆಚಾರ್ಯ ಎಂಬವರ ಮನೆಗೆ ಭಾಗಶ: ಹಾನಿಯಾದ ಬಗ್ಗೆ ವರದಿಯಾಗಿದೆ.
ಬಂಟ್ವಾಳ ಕಸ್ಬಾ ಗ್ರಾಮದ ಲೊರೆಟ್ಟೋ-ಪೊಣ್ಣಂಗಿಲ ಮಧ್ಯೆ ಬುಧವಾರ ರಾತ್ರಿ ವೇಳೆ ಮತ್ತೆ ಭೂಕುಸಿತದಿಂದಾಗಿ ಸಂಪರ್ಕರಸ್ತೆ ಹಾನಿಯಾಗಿದೆ ಎಂದು ಪುರಸಭಾಸದಸ್ಯ ವಾಸುಪೂಜಾರಿ ತಿಳಿಸಿದ್ದಾರೆ.ಮಂಗಳವಾರ ರಾತ್ರಿ ಇವರ ಕುಟುಂಬದ ದೈವಸ್ಥಾನದ ಮೇಲೆ ಗುಡ್ಡದ ಮಣ್ಣು ಜರಿದು ಬಿದ್ದು ಹಾನಿಯಾಗಿತ್ತು.ಆದೇ ಗುಡ್ಡ ಮತ್ತೆ ಜರಿದು ಬಿದ್ದಿದ್ದು,ಸಂಪರ್ಕರಸ್ತೆ ಕಡಿತಗೊಳ್ಳುವ ಭೀತಿ ಉಂಟಾಗಿದೆ.
ಆದೇರೀತಿ ಪಾಣೆಮಂಗಳೂರಿನ ಗೂಡಿನಬಳಿಯಲ್ಲಿ ಗುಡ್ಡ ಕುಸಿಯುವ ಭೀತಿ ಉಂಟಾಗಿದ್ದು, ಪುರಸಭೆಯ ನೀರು ಪೂರೈಕೆಯ ನೀರಿನ ಟಾಂಕಿ,ಪೈಪ್ ಲೈನ್,ಮನೆಗೆ ತೊಂದರೆಯಾಗುವ ಸಾಧ್ಯತೆ ಇದ್ದು,ಈ ಬಗ್ಗೆ ಪುರಸಭೆಗೆ ಸ್ಥಳೀಯ ಸದಸ್ಯರು ದೂರು ನೀಡಿದರೂ ಸ್ಪಂದಿಸದ ಹಿನ್ನಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ದೂರು ಸಲ್ಲಿಸಿದ್ದಾರೆ.