ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃಷ್ಣ ನಗರಿ ಉಡುಪಿಯ ರಥಬೀದಿಗೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರೀಕ್ ಬಂದಿದ್ದ ಎಂಬ ಮಾಹಿತಿ ಬಹಿರಂಗವಾದ ಬೆನ್ನಲ್ಲೇ, ಮಾಝ್ ಮುನೀರ್ ಮತ್ತು ಶಾರೀಕ್ ಜೊತೆ ನಿರಂತರ ಸಂಪರ್ಕ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಬ್ರಹ್ಮಾವರದ ವಾರಂಬಳ್ಳಿ ಗ್ರಾಮದ ರಿಶಾನ್ ಶೇಖ್ ಎಂಬ ವಿದ್ಯಾರ್ಥಿಯನ್ನು ಗುರುವಾರ ಎನ್.ಐ.ಎ ಪೊಲೀಸರು ವಶಕ್ಕೆ ಪಡೆದು ಬ್ರಹ್ಮಾವರದ ಮೀನಾ ಅನ್ಮೋಲ್ ಅಪಾರ್ಟ್ ಮೆಂಟ್ ಕರೆತಂದು ಪರಿಶೀಲನೆ ನಡೆಸಿದ್ದಾರೆ.
ಬ್ರಹ್ಮಾವರದ ಮೀನಾ ಅನ್ಮೋಲ್ ಅಪಾರ್ಟ್ ಮೆಂಟ್ನ ಫ್ಲ್ಯಾಟ್ ನಂಬರ್ 308 ರಲ್ಲಿ ರಿಶಾನ್ ಶೇಖ್ನ ಕುಟುಂಬ ವಾಸವಿದ್ದು, ಆತನ ತಂದೆ ತಾಜುದ್ದಿನ್ ಇಬ್ರಾಹಿಂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ನ ಕಾರ್ಯದರ್ಶಿಯಾಗಿದ್ದಾರೆ. ಬ್ರಹ್ಮಾವರ ತಾಲೂಕಿನ ಕುಮ್ರಗೋಡು ಜಾಮಿಯಾ ಮಸೀದಿಯಲ್ಲಿ ಉಪಾಧ್ಯಕ್ಷರಾಗಿರುವ ಇವರು, ಬ್ರಹ್ಮಾವರ ತಾಲೂಕು ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿಯಾಗಿರುತ್ತಾರೆ.
ಬ್ರಹ್ಮಾವರ ಬಸ್ಸು ನಿಲ್ದಾಣದಲ್ಲಿ ಕೆನರಾ ಫೂಟ್ ವೇರ್ ಎಂಬ ಅಂಗಡಿಯನ್ನು ಹೊಂದಿರುವ ತಾಜುದ್ದೀನ್, ತನ್ನ ಪರಿಚಯದವರಿಗೆ ನಡೆಸಲು ಕೊಟ್ಟಿದ್ದು, ಪ್ರಸ್ತುತ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ.
ಕ್ರೈಸ್ತ ಮತದಿಂದ ಇಸ್ಲಾಂ ಗೆ ಮತಾಂತರ
ರಿಶಾನ್ ತಾಯಿ ಉಡುಪಿ ತಾಲೂಕಿನ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೂಲತಃ ಬ್ರಹ್ಮಾವರ ತಾಲೂಕಿನ ಬಾರ್ಕೂರು ಮೂಲದವರಾಗಿದ್ದು, ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದು, ಮತಾಂತರಗೊಂಡು ತಾಜುದ್ದಿನ್ರವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ.
ಎನ್.ಐ.ಎ ಅಧಿಕಾರಿಗಳು ರಿಶಾನ್ ಶೇಖ್ನನ್ನು ಬ್ರಹ್ಮಾವರದ ಮನೆಗೆ ಕರೆದುಕೊಂಡು ಬಂದು, ಮನೆಯವರ ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಿದ್ದಾರೆ. ನಂತರ ಆತನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.