ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ರಾಜಕೀಯ ಹೊಯ್ದಾಟವು ಕಾವೇರುತ್ತಲೇ ಇದ್ದು ಇದೀಗ ಬಿಜೆಪಿಯೊಂದಿಗಿನ ಮೈತ್ರಿಯನ್ನು ನಿತೀಶ್ಕುಮಾರ್ ಕಡಿದುಕೊಳ್ಳುವುದು ಪಕ್ಕಾ ಆಗಿದ್ದು ಇದು ನಿತೀಶ್ ಕುಮಾರ್ ಅವರ ಅಸಮಾಧಾನವನ್ನು ತಿಳಿದಿದ್ದ ಬಿಜೆಪಿ ನಾಯಕರಿಗೆ ಶಾಕ್ ನೀಡಿದಂತಾಗಿದೆ. ಸೋಮವಾರದವರೆಗೂ ಬಿಜೆಪಿ ಜೆಡಿಯು ಮಧ್ಯೆ ಬಿರುಕಿಲ್ಲ ಎನ್ನುತ್ತಿದ್ದವರೆಲ್ಲರೂ ಈಗ ಮೌನಕ್ಕೆ ಜಾರುವಂತಾಗಿದೆ.
ತನ್ನೊಂದಿಗೆ ಹೆಚ್ಚಿನ ಹೊಂದಾಣಿಕೆಗಾಗಿ ಜೆಡಿಯು ಪಕ್ಷವು ಈ ರೀತಿಯಾಗಿ ಒತ್ತಡ ಹೇರುತ್ತಿದೆ ಎಂದು ಬಿಜೆಪಿಯ ಹಲವು ಮುಖಂಡರು ಭಾವಿಸಿದ್ದರು. ಆದರೆ ನಿರೀಕ್ಷೆಯೀಗ ಸುಳ್ಳಾಗಿದೆ. ಅಧಿಕಾರದ ಚೆಂಡು ನಿತೀಶ್ಕುಮಾರ್ ಕೈಯ್ಯಲ್ಲಿದ್ದು ತನಗೆ ಬೇಕಾದ ಮೈತ್ರಿಯನ್ನು ಬೇಕೆಂದಾಗ ಆಯ್ದುಕೊಳ್ಳುವ ನಿರ್ಣಾಯಕ ಸ್ಥಿತಿಯಲ್ಲಿ ಜೆಡಿಯು ನಿಂತಿದೆ. ನಿತೀಶ್ ಕುಮಾರ್ ಈ ವಿಭಜನೆಯನ್ನು ಔಪಚಾರಿಕವಾಗಿ ಘೋಷಿಸಲಿದ್ದಾರೆ ಎನ್ನಲಾಗಿದೆ.
ಎರಡು ಪಕ್ಷಗಳ ನಡುವೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ಬಿಕ್ಕಟ್ಟನ್ನು ಶಮನಗೊಳಿಸಲು ಬಿಜೆಪಿ ತನ್ನ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಇತ್ತೀಚಿನ ತಿಂಗಳುಗಳಲ್ಲಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಲು ಕಳುಹಿಸಿತ್ತು. ಆದರೆ ಅದ್ಯಾವುದೂ ಸದ್ಯ ಪ್ರಯೋಜನವಾಗಿಲ್ಲ. ಎನ್ಡಿಎ ಮೈತ್ರಿಕೂಟದಿಂದ ನಿತೀಶ್ ಹೊರಬರುವುದೀಗ ಪಕ್ಕಾ ಆಗಿದೆ.