ಹೊಸದಿಗಂತ ವರದಿ,ಶಿವಮೊಗ್ಗ:
ಯಾವುದೇ ಸಮಸ್ಯೆ ಎದುರಾದರೂ ಹೆಣ್ಣು ಮಕ್ಕಳು ಧೈರ್ಯ ಕಳೆದುಕೊಳ್ಳಬಾರದು ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕಿವಿಮಾತು ಹೇಳಿದರು.
ನಗರದ ಡಿವಿಎಸ್ ಕಲಾ ಮತ್ತು ವಿಜ್ನಾನ ಕಾಲೇಜಿನಲ್ಲಿ ಶನಿವಾರ ವೇದ ಚಿತ್ರ ತಂಡದೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದಲ್ಲಿ ಎಲ್ಲರಿಗೂ ಕಷ್ಟ ಬರುತ್ತೆ. ಕಷ್ಟ ಇದ್ದರೂ ಇಷ್ಟಪಟ್ಟು ಬಾಳು ನಡೆಸಬೇಕು. ಕಷ್ಟಪಟ್ಟು ಯಾರೂ ಬದಕುಕಬಾರದು. ಎಲ್ಲರೂ ಇಷ್ಟಪಟ್ಟು ಬದುಕಬೇಕು. ಮಕ್ಕಳು ಈಗಿನ ದಿನಗಳಲ್ಲಿ ಸಾಕಷ್ಟು ಬುದ್ಧಿವಂತರಿದ್ದಾರೆ. ಆದರೆ ಎಷ್ಟೇ ಮುಂದುವರಿದ್ದರೂ ಹೆಣ್ಣು ಮಕ್ಕಳು ಧೈರ್ಯ ಕಳೆದುಕೊಳ್ಳಬಾರದು ಎಂದರು.
ಧನಾತ್ಮಕ ಅಥವಾ ಋಣಾತ್ಮಕ ಯಾವುದೇ ಅಂಶ ಇದ್ದರೂ ಹೆಣ್ಣು ಮಕ್ಕಳು ತಂದೆ-ತಾಯಿ ಬಳಿ ಹೇಳಿಕೊಳ್ಳಬೇಕು. ತಂದೆ ಅಥವಾ ತಾಯಿ ಹತ್ತಿರ ಹೇಳಿಕೊಳ್ಳಲು ಆಗದಿದ್ದರೆ ಆತ್ಮೀಯ ಸ್ಮೇಹಿತರ ಹತ್ತಿರವಾದರೂ ಹೇಳಿಕೊಳ್ಳಬೇಕು. ನಿಜವಾದ ಸ್ಮೇಹಿತರು ಸಹಾಯಕ್ಕೆ ನಿಲ್ಲುತ್ತಾರೆ. ಯಾವುದೇ ವಿಷಯವನ್ನು ಮುಚ್ಚಿಡಬೇಡಿ. ಏನೇ ಕಷ್ಟ ಇದ್ದರೂ ನೇರವಾಗಿ ಮಾತನಾಡಬೇಕು ಎಂದರು.
ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ ಮಾತನಾಡಿ, ಇದೊಂದು ಮಹಿಳಾ ಶೋಷಣೆ ವಿರುದ್ಧದ ಚಿತ್ರ. ಹಿಂದೆಯೇ ಚಿತ್ರ ನಿರ್ಮಾಣದ ಆಸೆ ಇತ್ತು. ಆದರೆ ಆಗಿರಲಿಲ್ಲ. ನಿರ್ದೇಶಕ ಹರ್ಷ ಅವರು ಕಥೆ ಹೇಳಿದ ಮೇಲೆ ಚಿತ್ರ ನಿರ್ಮಿಸಬಹುದು ಅನ್ನಿಸಿತು ಎಂದರು.
ನಿರ್ದೇಶಕ ಹರ್ಷ ಮಾಸ್ಟರ್, ನಟಿಯರಾದ ಗಾನವಿ ಲಕ್ಷ್ಮಣ್, ಅದಿತಿ ಸಾಗರ್, ಮಾಜಿ ಶಾಸಕ ಮಧು ಬಂಗಾರಪ್ಪಘಿ, ಡಿವಿಎಸ್ ಉಪಾಧ್ಯಕ್ಷ ಎಸ್.ಪಿ. ದಿನೇಶ್ ಇನ್ನಿತರರಿದ್ದರು.