ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶಕ್ಕೆ (Amit Shah Visit to Arunachal Pradesh) ಭೇಟಿ ನೀಡಿದ್ದಾರೆ.
ಇತ್ತ ಚೀನಾ (China) ಆಕ್ಷೇಪ ವ್ಯಕ್ತಪಡಿಸಿದ್ದು,ಇದರ ಬೆನ್ನಲ್ಲೇ ಭಾರತದ ಒಂದು ಇಂಚು ನೆಲವನ್ನ ಯಾರೂ ಕಿತ್ತುಕೊಳ್ಳಲು ಆಗಲ್ಲ ಎಂದು ಚೀನಾ ವಿರುದ್ಧ ಅಮಿತ್ ಶಾ ಗುಡುಗಿದ್ದಾರೆ.
ಅಮಿತ್ ಶಾ ಅರುಣಾಚಲ ಪ್ರದೇಶಕ್ಕೆ ಭೇಟಿ ಕೊಡುತ್ತಾರೆಂದು ಗೊತ್ತಾದಾಗಲೂ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಅಮಿತ್ ಶಾ ಅರುಣಾಚಲಕ್ಕೆ ಹೋಗಬಾರದು. ಇದು ಚೀನಾ ಸಾರ್ವಭೌಮತ್ವಕ್ಕೆ ಧಕ್ಕೆ ತಂದಂತೆ ಎಂದು ಬೆದರಿಕೆಯನ್ನೂ ಹಾಕಿತ್ತು. ಆದರೆ, ಇದಕ್ಕೆ ಕಿವಿಗೊಡದ ಅಮಿತ್ ಶಾ ಅರುಣಾಚಲಕ್ಕೆ ಭೇಟಿ ನೀಡಿ ಕೆಲ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಿದ್ದಾರೆ.
ಯಾರೂ ಕೂಡ ನಮ್ಮ ಒಂದಿಂಚೂ ನೆಲವನ್ನೂ ಕಸಿಯಲು ಸಾಧ್ಯವಿಲ್ಲ. ಭಾರತದ ಭೂಭಾಗದ ಸಮಗ್ರತೆಯನ್ನು ಯಾರೂ ಪ್ರಶ್ನಿಸಲು ಆಗುವುದಿಲ್ಲ ಎಂದು ಅಮಿತ್ ಶಾ ಚೀನಾಗೆ ತಿರುಗೇಟು ನೀಡಿದ್ದಾರೆ.
ಚೀನಾ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಕಿಬಿತೂ ಎಂಬ ಗ್ರಾಮದಲ್ಲಿ ವೈಬ್ರೆಂಟ್ ವಿಲೇಜಸ್ ಯೋಜನೆಯನ್ನು ಅಮಿತ್ ಶಾ ಚಾಲನೆಗೆ ತಂದಿದ್ದಾರೆ. ಈ ವೇಳೆ ಮಾತನಾಡುತ್ತಾ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈಶಾನ್ಯ ರಾಜ್ಯಗಳಿಗೆ ಪ್ರಾಶಸ್ತ್ಯ ನೀಡಿತ್ತಿದೆ ಎಂದು ಹೇಳಿದರು.
2014ಕ್ಕೆ ಮುಂಚೆ ಇಡೀ ಈಶಾನ್ಯ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂಬಂತೆ ನೋಡಲಾಗುತ್ತಿತ್ತು. ಕಳೆದ 9 ವರ್ಷದಲ್ಲಿ ಪ್ರಧಾನಿ ಮೋದಿ ಅವರ ಲುಕ್ ಈಸ್ಟ್ ನೀತಿ ದೆಸೆಯಿಂದಾಗಿ ಈಶಾನ್ಯ ರಾಜ್ಯಗಳು ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರದೇಶಗಳಾಗಿ ಪರಿಗಣಿತವಾಗಿವೆ ಎಂದು ಅಮಿತ್ ಶಾ ಹೇಳಿದ್ದಾರೆ.