ಹೊಸದಿಗಂತ ವರದಿ,ಶಿವಮೊಗ್ಗ :
ಸಾಗರ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ಊರು. ಇಬ್ಬರು ಯುವಕರ ನಡುವಿನ ಜಗಳಕ್ಕೆ ಕೋಮುಬಣ್ಣ ಕಟ್ಟಿ ಊರಿನಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡಬಾರದು ಎಂದು ಅಂಜುಮನ್ ಎ ಸಾಗರ ಸಮಿತಿ ಅಧ್ಯಕ್ಷ ಸೈಯದ್ ಇಕ್ಬಾಲ್ ಮನವಿ ಮಾಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀರ್ ಮಾಡಿರುವ ಕೃತ್ಯವನ್ನು ನಮ್ಮ ಸಮಿತಿ ಖಂಡಿಸುತ್ತಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಕೊಡಿ. ಕಾನೂನು ಬಾಹಿರ ಕೃತ್ಯ ನಡೆಸುವವರ ಪರವಾಗಿ ಮುಸ್ಲಿಂ ಸಮಾಜ ಮತ್ತು ನಮ್ಮ ಸಮಿತಿ ನಿಲ್ಲುವುದಿಲ್ಲ ಎಂದು ಹೇಳಿದರು.
ಪೊಲೀಸ್ ಇಲಾಖೆ ಘಟನೆ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ತಿಳಿಸಬೇಕು. ಪ್ರಕರಣದಲ್ಲಿ ಅಮಾಯಕರನ್ನು ವಶಕ್ಕೆ ಪಡೆಯಬಾರದು ಎಂದು ಮನವಿ ಮಾಡಿದರು.
ಸಮಿತಿಯ ಮಹ್ಮದ್ ಖಾಸಿಂ, ನೂರುದ್ದೀನ್, ಖಾಲಿದ್, ಸೈಯದ್ ಜಲೀಲ್, ಮಹ್ಮದ್ ಇಕ್ಬಾಲ್, ಅನಿಸ್, ಖಲಂದರ್, ರಫೀಕ್, ರಿಯಾಜ್, ಅಕ್ಬರಾಲಿ ಖಾನ್, ಸಫಿ ಅಹ್ಮದ್, ಶಬ್ಬೀರ್ ಇನ್ನಿತರರು ಹಾಜರಿದ್ದರು.