ಉಸ್ತುವಾರಿ ಸಚಿವರ ಬದಲಾವಣೆಯ ಹಿಂದೆ ಯಾವುದೇ ಸ್ವ ಹಿತಾಸಕ್ತಿಯೂ ಕೆಲಸ ಮಾಡಿಲ್ಲ: ಸಚಿವ ಶಿವರಾಮ ಹೆಬ್ಬಾರ್

ಹೊಸದಿಗಂತ ವರದಿ, ಶಿರಸಿ:

ಉಸ್ತುವಾರಿ ಸಚಿವರ ದಿಢೀರ್‌ ಬದಲಾವಣೆಯ ಹಿಂದೆ ಯಾರ ಪ್ರಭಾವ ಅಥವಾ ಯಾವುದೇ ಸ್ವ ಹಿತಾಸಕ್ತಿಯೂ ಕೆಲಸ ಮಾಡಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ಮಂಗಳವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಒಂದೇ ಜಿಲ್ಲೆಯ ಉಸ್ತುವಾರಿ ಬದಲಾವಣೆಯಾಗಿದ್ದರೆ ಅನುಮಾನದ ನಡೆ ಎನ್ನಬಹುದಾಗಿತ್ತು. ಆದರೆ ಇಡೀ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಯ ಉಸ್ತುವಾರಿ ಸಚಿವರು ಬದಲಾಗಿದ್ದಾರೆ. ಇದರಲ್ಲಿ ಯಾರ ಹಿತಾಸಕ್ತಿಯೂ ಕೆಲಸ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ಇದು ಮುಂಬರುವ ಚುನಾವಣೆಯ ಗಿಮಿಕ್‌ ಆದರೂ ಆಗಿರಬಹುದು. ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ ಉಸ್ತುವಾರಿ ಸಚಿವರ ಬದಲಾವಣೆ ಮಾಡಿ ಯಶಸ್ಸು ಸಿಕ್ಕಿದ್ದು, ಅದೇ ಪ್ರಯೋಗವನ್ನು ರಾಜ್ಯದಲ್ಲಿಯೂ ಮಾಡುವ ಉದ್ದೇಶದಿಂದ ಬದಲಾವಣೆ ಮಾಡಿರಬಹುದು. ಅಲ್ಲದೇ ಉಸ್ತುವಾರಿ ಬದಲಾವಣೆಯಿಂದ ಜಿಲ್ಲೆಗೇನೂ ಹಾನಿಯಾಗದು. ನಾನು ಬರುವ ಮೊದಲು ಬಿಜೆಪಿ ಇತ್ತು. ಮುಂದೆಯೂ ಬಿಜೆಪಿ ಬೆಳೆಯುತ್ತದೆ. ಇಲ್ಲಿ ಯಾರೂ ಅನಿವಾರ್ಯ ಅಲ್ಲ ಎಂದರು.
ಉಸ್ತುವಾರಿ ಬದಲಾವಣೆಯಿಂದ ನನಗೇನೂ ಬೇಸರ ಆಗಿಲ್ಲ ಎಂದ ಅವರು,  ಜಿಲ್ಲೆ ಬದಲಾವಣೆ ಆದ ಮಾತ್ರಕ್ಕೆ ಇಲ್ಲಿ ಕೆಲಸ ಮಾಡಬಾರದು ಎಂದೇನೂ ಇಲ್ಲ. ಹಿಂದಿನ ಸವಿವರಿಂದ ಮಾಹಿತಿ ಪಡೆದು ಕೆಲಸ ಮಾಡುತ್ತೇವೆ ಎಂದ ಅವರು, ಹಾವೇರಿ ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿದ್ದು, ಅವರ ತವರು ಜಿಲ್ಲೆಯನ್ನು ನನಗೆ ಉಸ್ತುವಾರಿಯಾಗಿ ನೀಡಿದ್ದು ತಂತೋಷದ ಸಂಗತಿ. ಹಾವೇರಿಯಲ್ಲಿ ಪಕ್ಷ ಸಂಘಟನೆ ಸೇರಿದಂತೆ ವಿವಿಧ ಉತ್ತಮ ಕೆಲಸ ಮಾಡಿ ಅವರು ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ತಿಳಿಸಿದರು.
ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಮಾಡಿರುವುದು ಅತ್ಯುತ್ತಮ ಸಂಗತಿ. ಪೂಜಾರಿ ಅವರು ಹಿರಿಯರು ಅಲ್ಲದೇ ಸಮರ್ಥರಿದ್ದಾರೆ. ಹಿಂದೆ ಜಿಲ್ಲೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಜಿಲ್ಲೆ ಸಮಸ್ಯೆ ನಮ್ಮ ಜಿಲ್ಲೆ ಸಮಸ್ಯೆ ಬಹುತೇಕ ಒಂದೇ ಇದೆ. ಹೀಗಾಗಿ ಅವರೊಂದಿಗೆ ಸೇರಿ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!