ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಮೂರಿ ತಾರಕರತ್ನ ಒಂದಾನೊಂದು ಕಾಲದಲ್ಲಿ ಹೀರೋ ಆಗಿ ಸಿನಿಮಾ ಮಾಡಿ ಆಮೇಲೆ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಈಗ ಮಧ್ಯೆ ಮಧ್ಯೆ ಸಿನಿಮಾ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಟಿಡಿಪಿ ಪಕ್ಷದ ಚಟುವಟಿಕೆಗಳಲ್ಲಿ ಮತ್ತು ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಕುಪ್ಪಂನಲ್ಲಿ ನಾರಾ ಲೋಕೇಶ್ ಯುವಗಲಂ ಹೆಸರಿನಲ್ಲಿ ಪಾದಯಾತ್ರೆ ವೇಳೆ ನಟ ತಾರಕರತ್ನ ಕುಸಿದುಬಿದ್ದರು. ಕೂಡಲೇ ಕಾರ್ಯಕರ್ತರು ಅವರನ್ನು ಕುಪ್ಪಂ ಆಸ್ಪತ್ರೆಗೆ ಕರೆದೊಯ್ದರು.
ನಟ ತಾರಕರತ್ನ ಅವರಿಗೆ ಕುಪ್ಪಂ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೃದಯಾಘಾತವಾಗಿದೆ ಎಂದು ತಿಳಿದು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಂಗಳೂರು ಆಸ್ಪತ್ರೆಯಲ್ಲಿ ವೈದ್ಯರು ತಾರಕರತ್ನ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಶನಿವಾರ ತಾರಕರತ್ನ ಆರೋಗ್ಯದ ಕುರಿತು ವಿಶೇಷ ಬುಲೆಟಿನ್ ಬಿಡುಗಡೆ ಮಾಡಿದ್ದು, ಸದ್ಯ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಚಂದ್ರಬಾಬು, ಬಾಲಕೃಷ್ಣ, ಪುರಂದೇಶ್ವರಿ ಹಾಗೂ ನಂದಮೂರಿ ಕುಟುಂಬಸ್ಥರು ಈಗಾಗಲೇ ಬೆಂಗಳೂರು ಆಸ್ಪತ್ರೆ ತಲುಪಿದ್ದಾರೆ. ತಾರಕರತ್ನ ಅವರ ಪತ್ನಿ ಹಾಗೂ ಪುತ್ರಿ ಕೂಡ ಬೆಂಗಳೂರು ಆಸ್ಪತ್ರೆಯಲ್ಲಿದ್ದಾರೆ.
ಜೂನಿಯರ್ ಎನ್ ಟಿಆರ್ ಹಾಗೂ ಕಲ್ಯಾಣ್ ರಾಮ್ ಕೂಡ ಇಂದು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ತಾರಕರತ್ನರನ್ನು ನೋಡಲು ಬರಲಿದ್ದಾರೆ. ಹೈದರಾಬಾದ್ ನಿಂದ ವಿಶೇಷ ವಿಮಾನದಲ್ಲಿ ಬರಲಿರುವ ಎನ್ ಟಿಆರ್ ಹಾಗೂ ಕಲ್ಯಾಣ್ ರಾಮ್ ಆಸ್ಪತ್ರೆಗೆ ತೆರಳಲಿದ್ದಾರೆ. ಅಭಿಮಾನಿಗಳು ಮತ್ತು ಟಿಡಿಪಿ ಕಾರ್ಯಕರ್ತರು ತಾರಕರತ್ನ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಚಂದ್ರಬಾಬು, ಬಾಲಕೃಷ್ಣ ಮತ್ತು ಹಲವು ಟಿಡಿಪಿ ನಾಯಕರು ಆಸ್ಪತ್ರೆಯಲ್ಲಿದ್ದು, ನಿಗಾ ವಹಿಸುತ್ತಿದ್ದಾರೆ.