ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮರಾವತಿ ಮೂಲದ ಉಮೇಶ್ ಕೋಲ್ಹೆ ಹತ್ಯೆ ಪ್ರಕರಣದ ಮಹತ್ವದ ಮಾಹಿತಿಯನ್ನು ಎನ್ಐಎ ಬಹಿರಂಗಪಡಿಸಿದೆ.
ಈಗಾಗಲೇ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಚುರುಕುಗೊಳಿಸಿದ್ದು, ಎಲ್ಲ ಏಳು ಆರೋಪಿಗಳನ್ನು ವಶಕ್ಕೆ ಪಡೆದಿರುವ ಎನ್ಐಎ ತನಿಖೆಯಿಂದ ಕೆಲ ವಿಚಾರಗಳು ಬೆಳಕಿಗೆ ಬಂದಿದೆ.
ಉಮೇಶ್ ಕೋಲ್ಹೆ ಹತ್ಯೆ ಪ್ರಕರಣಕ್ಕೆ ನೇರ ಅಂತಾರಾಷ್ಟ್ರೀಯ ಸಂಪರ್ಕ ಇರುವುದು ತನಿಖೆಯಿಂದ ತಿಳಿದುಬಂದಿದೆ. ಹಿಂದು ಧರ್ಮದಲ್ಲಿ ಭಯೋತ್ಪಾದನೆ ಸೃಷ್ಟಿಸುವ, ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ಉಮೇಶ್ ಕೋಲ್ಹೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಎನ್ಐಎ ಎಫ್ಐಆರ್ ಕೂಡ ದಾಖಲಿಸಿದೆ.
ಪ್ರಕರಣದಲ್ಲಿ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ಒಂಬತ್ತು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಉಮೇಶ್ ಕೋಲ್ಹೆ ಅವರ ಹತ್ಯೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಆರ್ಥಿಕ ನೆರವು ನೀಡಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಉಮೇಶ್ ಕೋಲ್ಹೆ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೇಖ್ ಇರ್ಫಾನ್ ಶೇಖ್ ರಶೀದ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಆರ್ಥಿಕ ನೆರವು ಪಡೆದ ಆರೋಪವೂ ಇದೆ. ಈ ಪ್ರಕರಣದಲ್ಲಿ ಅಮರಾವತಿ ನಗರದ ಇನ್ನೂ ಹಲವರನ್ನು ಎನ್ಐಎ ವಶಕ್ಕೆ ಪಡೆಯಲಿದೆ ಎಂದು ತಿಳಿದುಬಂದಿದೆ.
ಜೂನ್ 21ರ ರಾತ್ರಿ 10:30ರ ವೇಳೆ ಉಮೇಶ್ ಕೋಲ್ಹೆ ಮೇಲೆ ಮೂವರ ತಂಡ ಚಾಕುವಿನಿಂದ ಹಲ್ಲೆ ನಡೆಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಘಟನೆಯಿಂದ ಇಡೀ ನಗರವೇ ಬೆಚ್ಚಿಬಿದ್ದಿದೆ. ಪ್ರವಾದಿ ಮುಹಮ್ಮದ್ ಕುರಿತು ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಉಮೇಶ್ ಕೋಲ್ಹೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಾಕಿದ್ದಕ್ಕೆ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.