ಹೊಸದಿಗಂತ ಡಿಜಿಟಲ್ ಡೆಸ್ಕ್
ಸಾಧಾರಣವಾಗಿ ಬಹಳಾ ವರ್ಷದಿಂದ ಬಿದ್ದ ಮನೆಯಲ್ಲಿ ಏನಿರುತ್ತೆ? ಹೆಚ್ಚೆಂದರೆ ಧೂಳು- ಕಸ-ಕಡ್ಡಿ ಇರಬಹುದು ಅಲ್ವೇ.. ಆದರೆ ಒರಿಸ್ಸಾದಲ್ಲೊಂದು ಪಾಳು ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿ ಸಂಚಲನವೇ ಸೃಷ್ಟಿಯಾಗಿದೆ. ಭುವನೇಶ್ವರದ ಪಾಳುಬಿದ್ದ ಮನೆಯೊಂದರಲ್ಲಿ ಒಟ್ಟು ರೂ. 3.41 ಕೋಟಿ ನಗದು, ಚಿನ್ನಾಭರಣ ಪತ್ತೆಯಾಗಿದೆ. ಈ ಎಲ್ಲಾ ಹಣವನ್ನು ಭ್ರಷ್ಟಾಚಾರಿಯೊಬ್ಬ ಅವತಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇಷ್ಟೊಂದು ಹಣ ಗಂಜಾಂ ಭಂಜನಗರ್ ನಗರದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ (ಎಇ) ಕಾರ್ತಿಕೇಶ್ವರ ರಾವ್ ಗೆ ಸೇರಿದ್ದಾಗಿ ತಿಳಿದುಬಂದಿದೆ. ಆತ ತನ್ನ ಕರ್ತವ್ಯದಲ್ಲಿ ಭಾರಿ ಅಕ್ರಮ ಎಸಗಿರುವ ಬಗ್ಗೆ, ಬಡವರ ಸುಲಿಗೆ ಆರೋಪಗಳು ಸಹ ಹಲವು ಬಾರಿ ಕೇಳಿ ಬಂದಿದ್ದವು. ಹಾಗಾಗಿ ಆತನ ನಿವಾಸಕ್ಕೆ ವಿಜಿಲೆನ್ಸ್ ಅಧಿಕಾರಿಗಳು ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಈ ವೇಳೆ ಅಧಿಕಾರಿಗಳಿಗೆ ಅನೇಕ ಹೊಸ ಮಾಹಿತಿಗಳು ತಿಳಿದುಬಂದಿದ್ದವು.
ಕಾರ್ತಿಕೇಶ್ವರ ರಾವ್ ಗೆ ಗುಟ್ಟಾಗಿ ಕಲ್ಪನಾ ಎಂಬ ಎರಡನೇ ಪತ್ನಿ ಇರುವುದು ತಿಳಿದುಬಂದಿದೆ. ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಮೊದಲ ಪತ್ನಿಗೆ ತಿಳಿಯದಂತೆ ಕಲ್ಪನಾಳನ್ನು ಮದುವೆಯಾಗಿರುವುದು ದೃಢಪಟ್ಟಿದೆ. ಸಲಿಯಾಸಾಹಿ ಬಸ್ತಿಯಲ್ಲಿರುವ ಕುಸಿದ ಮನೆಯೊಂದರಲ್ಲಿ ಆಕೆ ವಾಸಿಸುತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪಾಳು ಬಿದ್ದರುವ ಮನೆಯಲ್ಲಿನ ವಾಸ ಕಂಡು ಅನುಮಾನದಿಂದ ಶೋಧ ನಡೆಸಿದಾಗ 3.41 ಕೋಟಿ ನಗದು ಹಾಗೂ 940 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ.
ದೊರೆತ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಒಟ್ಟು ರೂ. 7 ಕೋಟಿ ಮೌಲ್ಯದ ನಗದು ಮತ್ತು ಆಸ್ತಿ ಪತ್ತೆಯಾಗಿದೆ ಎಂದು ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಲ್ಪನಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ