ಹೊಸದಿಗಂತ ವರದಿ,ಕೊಡಗು:
ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ತಾಲೂಕು ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಪೊನ್ನಂಪೇಟೆ ವಿದ್ಯಾರ್ಥಿನಿಲಯದ ಉಸ್ತುವಾರಿ ವಹಿಸಿಕೊಂಡಿದ್ದ ಎಸ್.ಟಿ.ಮಲ್ಲಿಕಾರ್ಜುನ್ ಎಂಬವರೇ ಅಮಾನತುಗೊಂಡಿರುವ ಅಧಿಕಾರಿ.
ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಆಗಾಗ್ಗೆ ಭೇಟಿ ನೀಡಿ, ನಿಲಯದ ಶೌಚಾಲಯಗಳನ್ನು ಬಳಸುವುದಲ್ಲದೆ, ವಿದ್ಯಾರ್ಥಿನಿಯರು ಮಲಗಿರುವ ವೇಳೆ ದಿಢೀರಾಗಿ ಕೋಣೆಗೆ ಭೇಟಿ ನೀಡುತ್ತಿದ್ದರು. ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುವ ಬಗ್ಗೆ ಟೀಕೆ ವ್ಯಕ್ತಪಡಿಸಿ ಅಸಭ್ಯ ಹಾಗೂ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಹಿರಿಯ ಅಧಿಕಾರಿಗಳು ಮೌಖಿಕವಾಗಿ ತಾಲೂಕು ಅಧಿಕಾರಿಯಾಗಿದ್ದ ಮಲ್ಲಿಕಾರ್ಜುನ ಅವರಿಗೆ ತಿಳಿ ಹೇಳಿದರೂ ಪ್ರಯೋಜನವಾಗಿರಲಿಲ್ಲ. ವಿದ್ಯಾರ್ಥಿನಿಯರು ಇದರಿಂದ ನೊಂದು ತಮ್ಮ ನೋವನ್ನು ಸ್ಥಳೀಯ ಪೊನ್ನಂಪೇಟೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಶಾಜಿ ಅಚ್ಚುತನ್ ಬಳಿ ತೋಡಿಕೊಂಡಿದ್ದರು. ಅಲ್ಲದೆ ವಿದ್ಯಾರ್ಥಿನಿಯರು ಲಿಖಿತವಾಗಿ ಪತ್ರ ನೀಡಿದ್ದರು.
ಪತ್ರದ ಆಧಾರದ ಮೇಲೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ವೇಳೆ ಸಮಸ್ಯೆಯ ಗಂಭೀರತೆ ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ಬಂದಿತ್ತು. ಅಧಿಕಾರಿಯಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆಯುಕ್ತರಿಗೆ ಪತ್ರ ಬರೆದು ಮಾಹಿತಿ ರವಾನಿಸಿದರು.
ಅಧಿಕಾರಿಗಳ ವರದಿಯ ಹಿನ್ನೆಲೆಯಲ್ಲಿ ಆಯುಕ್ತರು ಕರ್ತವ್ಯ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ, ನಿಲಯಗಳ ಸುಗಮ ನಿರ್ವಹಣೆಯಲ್ಲಿ ವಿಫಲತೆ, ವಿದ್ಯಾರ್ಥಿನಿಲಯದಲ್ಲಿ ಅಸಭ್ಯ ವರ್ತನೆಯ ಕಾರಣ ನೀಡಿ ಮಲ್ಲಿಕಾರ್ಜುನ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.