ಹೊಸದಿಗಂತ ವರದಿ ವಿಜಯನಗರ:
ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಗಲಭೆ ಪ್ರಕರಣ ಸಂಬಂಧ ಉನ್ನತ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಹೊಸಪೇಟೆಯಲ್ಲಿ ಭಾನುವಾರ ರಾಜ್ಯ ಕಾರ್ಯಕಾರಣಿ ಸಭೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕನೊಬ್ಬ ಅವಹೇಳನಕಾರಿ ವಾಟ್ಸಾಪ್ ಸ್ಟೇಟಸ್ ಹಾಕಿರುವ ಬಗ್ಗೆ ದೂರು ಬಂದಿದ್ದು, ಪೊಲೀಸರು ಯುವಕನನ್ನು ಬಂಧಿಸಿದ್ದರು. ಯುವಕನ ಪರವಾಗಿ ಸಾವಿರಾರು ಜನರ ಗುಂಪು ಏಕಾಏಕಿ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಗಲಭೆ ನಡೆಸಲೆಂದೇ ಬಂದಿದ್ದ ಗುಂಪು ಪೊಲೀಸ್ ವಾಹನ ಸೇರಿ ಸಾರ್ವಜನಿಕ ಆಸ್ತಿ ನಾಶ ಮಾಡಿದ್ದಾರೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಗಲಭೆಯಲ್ಲಿ ಓರ್ವ ಪೊಲೀಸ್ ಗಂಭೀರವಾಗಿದ್ದು, ಕೆಲ ಪೊಲೀಸರಿಗೆ ಗಾಯಗಳಾಗಿವೆ. ಗಾಯಾಳು ಪೇದೆಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಭೆಯ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹುಬ್ಬಳ್ಳಿಗೆ ಹೋಗಿದ್ದಾರೆ ಎಂದರು.
ಪೂರ್ವನಿಯೋಜಿತ ಕೃತ್ಯ ಎಂದ ಸಚಿವ
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಂತೆ ಹಳೆ ಹುಬ್ಬಳ್ಳಿ ಗಲಭೆಯೂ ಪೂರ್ವನಿಯೋಜಿತ ಎಂಬ ಅನುಮಾನ ಮೂಡಿದೆ. ಠಾಣೆಗೆ ಕಲ್ಲು ತೂರಾಟ ನಡೆಸಿದ್ದು, ಅಷ್ಟೊಂದು ಪ್ರಮಾಣದ ಕಲ್ಲುಗಳು ಬರಲು ಹೇಗೆ ಸಾಧ್ಯ? ಈ ಸಂಬಂಧ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.