ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಶಿವಮೊಗ್ಗ :
ಮೈಸೂರು ವಿಶ್ವವಿದ್ಯಾಲಯ ನಡೆಸುವ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ನಾಳೆ (ಜು. 25) ಶಿವಮೊಗ್ಗ ನಗರದ
ವಿವಿಧ ಕಾಲೇಜುಗಳಲ್ಲಿ ನಡೆಯಲಿದೆ. ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗಾಗಿ ಮೂರು ಕ್ಲಸ್ಟರ್ಗಳಡಿ ಒಟ್ಟು ಹತ್ತು ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ. ಕಳೆದ ಏಪ್ರಿಲ್ 11ರಂದು ನಿಗದಿಯಾಗಿದ್ದ ಪರೀಕ್ಷೆ ಮೊದಲಿಗೆ ಕೆಎಸ್ಆರ್ಟಿಸಿ ಬಸ್ ಮುಷ್ಕರ ಮತ್ತು ನಂತರ ಕೋವಿಡ್-19 ಲಾಕ್ಡೌನ್ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.
ಯಾವ ಕಾಲೇಜು ಸಹ್ಯಾದ್ರಿ ಕಾಲೇಜು ಆವರಣದಲ್ಲಿರುವ ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ವಿಜ್ಞಾನ ಕಾಲೇಜು ಮತ್ತು ಸಹ್ಯಾದ್ರಿ ವಾಣಿಜ್ಯ ಕಾಲೇಜು ಮೊದಲ ಕ್ಲಸ್ಟರ್ನಲ್ಲಿದ್ದರೆ, ಡಿವಿಎಸ್ ಕಲೆ ಮತ್ತು ವಿಜ್ಞಾನ ಕಾಲೇಜು, ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಡಿವಿಎಸ್ ಸಂಯುಕ್ತ ಪಿಯು ಕಾಲೇಜು ಎರಡನೆಯ ಕ್ಲಸ್ಟರ್ನಲ್ಲಿದೆ. ಇನ್ನು ಎಸ್ಆರ್ಎನ್ಎಂಎನ್ ಅನ್ವಯಿಕ ವಿಜ್ಞಾನ ಕಾಲೇಜು, ಎಟಿಎನ್ಸಿಸಿ ಕಾಲೇಜು, ಸಿಬಿಆರ್ ನ್ಯಾಷನಲ್ ಕಾನೂನು ಕಾಲೇಜು ಮತ್ತು ಎಚ್ಎಸ್ಆರ್ ನ್ಯಾಷನಲ್ ಪಿಯು ಕಾಲೇಜುಗಳನ್ನು ಮೂರನೆಯ ಕ್ಲಸ್ಟರ್ಗಳಾಗಿ ವಿಂಗಡಿಸಲಾಗಿದೆ.
ಪರೀಕ್ಷೆಯ ಮೊದಲ ಪೇಪರ್ ಬೆಳಿಗ್ಗೆ 9.30ರಿಂದ 10.30ರವರೆಗೆ ನಡೆಯಲಿದ್ದು, ಮೂವತ್ತು ನಿಮಿಷದ ಬಿಡುವಿನ ಬಳಿಕ ಎರಡನೆಯ ಪೇಪರ್ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಪರೀಕ್ಷಾರ್ಥಿಗಳು ತಮ್ಮ ಗುರುತಿನ ಚೀಟಿ ಮತ್ತು ಪ್ರವೇಶಾತಿ ಚೀಟಿಯೊಂದಿಗೆ ಬೆಳಿಗ್ಗೆ 8.30ಕ್ಕೆ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ವರದಿ ಮಾಡಿಕೊಳ್ಳಬೇಕು. ಕೋವಿಡ್ ಮಾರ್ಗಸೂಚಿ ಅನ್ವಯವಾಗುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಕುವೆಂಪು ವಿವಿ ಕೆ-ಸೆಟ್ ಪರೀಕ್ಷಾ ಸಂಯೋಜಕ ಡಾ. ರಾಜೇಶ್ವರ್ ತಿಳಿಸಿದ್ದಾರೆ.