ಹೊಸದಿಗಂತ ಡಿಜಿಟಲ್ ಡೆಸ್ಕ್:
ʻಎರಡು ಬಾರಿ ಪ್ರಧಾನಿಯಾದ ನಂತರ ಸಾಧನೆ ಮಾಡಲು ಇನ್ನೇನು ಉಳಿದಿದೆʼ. ಎಂದು ವಿರೋಧ ಪಕ್ಷದ ನಾಯಕರೊಬ್ಬರು ನರೇಂದ್ರ ಮೋದಿಯವರನ್ನು ಪ್ರಶ್ನೆ ಮಾಡಿದ್ದರಂತೆ. ಈ ಘಟನೆಯನ್ನು ಉಲ್ಲೇಖಿಸುತ್ತಾ ಮಾತನಾಡಿದ ಮೋದಿಯವರು ʻಸರ್ಕಾರದ ಯೋಜನೆಗಳು ಶೇಕಡಾ 100ರಷ್ಟು ಜನರಿಗೆ ತಲುಪುವವರೆಗೂ ನಾನು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲʼ ಎಂಬ ಮಾತನ್ನು ಹೇಳುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಸುಳಿವನ್ನು ನೀಡಿದ್ದಾರೆ.
ಗುರುವಾರ ಗುಜರಾತ್ನ ಭರೂಚ್ನಲ್ಲಿ ನಡೆದ ಉತ್ಕರ್ಷ್ ಸಮಾರೋಹ್ನಲ್ಲಿ ಮಾತನಾಡಿದ ಮೋದಿ, ಒಮ್ಮೆ ವಿರೋಧ ಪಕ್ಷದ ಅತ್ಯಂತ ಹಿರಿಯ ನಾಯಕರೊಬ್ಬರು ಕೆಲ ಸಮಸ್ಯೆಗಳ ಪರಿಹಾರಕ್ಕಾಗಿ ನನ್ನನ್ನು ಭೇಟಿಯಾಗಿದ್ದರು. ಭೇಟಿ ಸಮಯದಲ್ಲಿ ‘ಮೋದಿಜಿ, ನೀವು ಇನ್ನೇನು ಸಾಧನೆ ಮಾಡಲು ಬಯಸುತ್ತೀರಿ..? ದೇಶದ ಜನ ನಿಮ್ಮನ್ನು ಎರಡು ಬಾರಿ ಪ್ರಧಾನಿಯನ್ನಾಗಿ ಮಾಡಿದ್ದಾರೆ. ಅಂತ ಪ್ರಶ್ನೆ ಮಾಡಿದ್ದರು. ಅವರ ಪ್ರಕಾರ ಎರಡು ಬಾರಿ ಪ್ರಧಾನಿಯಾಗುವುದೇ ದೊಡ್ಡ ಸಾಧನೆ ಅಂದುಕೊಂಡಿದ್ದಾರೆ.
ಆದರೆ ಈ ಮೋದಿ ಬೇರೆ ಯಾವುದೋ ವಸ್ತುವಿನಿಂದ ಮಾಡಲ್ಪಟ್ಟವರು ಎಂದು ಅವರಿಗೆ ತಿಳಿದಿಲ್ಲ. ಗುಜರಾತ್ನ ಮಣ್ಣು ನನ್ನನ್ನು ರೂಪಿಸಿದೆ. ನಾನು ಈಗ ವಿಶ್ರಾಂತಿ ಪಡೆದರೆ ಆಗುವುದಿಲ್ಲ. ನನ್ನ ಕನಸು ಸ್ಯಾಚುರೇಶನ್. ಸರ್ಕಾರದ ಯೋಜನೆಗಳು ಶೇಕಡಾ 100ರಷ್ಟು ಜನರಿಗೆ ತಲುಪುವವರೆಗೂ ನಾನು ವಿಶ್ರಮಿಸುವುದಿಲ್ಲ ಎಂದು ಪ್ರಧಾನಿ ಮೋದಿಯವರು ಹೇಳಿದರು.