ಹೊಸದಿಗಂತ ವರದಿ ಹುಬ್ಬಳ್ಳಿ:
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದುರ್ಗಪ್ಪ ಬಿಜವಾಡ ಅವರ ಪರವಾಗಿ ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾವುದುದ್ದೀನ್ ಓವೈಸಿ ಮೇ 2ರಂದು ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಲತೀಫ್ ಖಾನ ಪಠಾಣ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 7ಗಂಟೆಗೆ ಮಂಟೂರ ರಸ್ತೆಯಲ್ಲಿರುವ ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ಮಾಡಲಿದ್ದಾರೆ. ಇನ್ನೂ ನಗರದ ಹನ್ಸ್ ಹೋಟೆಲ್ ನಲ್ಲಿ ಸಂಜೆ 4 ಗಂಟೆಗೆ ಪ್ರಬುದ್ದರೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮೇ 4 ರಿಂದ 5ರ ವರೆಗೆ ಬಸವನ ಬಾಗೇವಾಡಿ ಹಾಗೂ ಕೋಲಾರದಲ್ಲಿ ಸಭೆ ಹಾಗೂ ಪಾದಯಾತ್ರೆ ಮೂಲಕ ಮತಯಾಚಿಸುವರು. ಮೇ 6 ಹಾಗೂ 7 ರಂದು ಹು-ಧಾ ಪೂರ್ವ ವಿಧಾನ ಸಭಾಕ್ಷೇತ್ರದ ಅಭ್ಯರ್ಥಿ ಪರವಾಗಿ ಪಾದಯಾತ್ರೆ ಮೂಲಕ ಮತ ಯಾಚನೆ ಮಾಡಲಿದ್ದಾರೆ ಎಂದು ಹೇಳಿದರು.
ಎಐಎಂಐಎಂನ ಪಾಲಿಕೆ ಸದಸ್ಯ ನಜೀರ್ ಅಹ್ಮದ ಹೊನ್ಯಾಳ, ರಾಖೇಶ ಬಸವರಾಜ, ಪೂರ್ವ ಕ್ಷೇತ್ರದ ಅಭ್ಯರ್ಥಿ ದುರ್ಗಪ್ಪ ಬಿಜವಾಡ, ಲಕ್ಷ್ಮಿ ಬಿಜವಾಡ, ಎಸ್.ಎನ್. ಬಡಿಗೇರ ಇದ್ದರು.