ಪಳ್ಳಿ ಮಹಾಂಕಾಳಿ ಮಠ ಬ್ರಹ್ಮಕಲಶ | ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ: ಕೇಮಾರು ಶ್ರೀ

ಹೊಸದಿಗಂತ ಆನ್‌ಲೈನ್ ಡೆಸ್ಕ್

ಮಕ್ಕಳಿಗೆ ಮೌಲ್ಯಯುತ, ಸಂಸ್ಕಾರಯುತ ಶಿಕ್ಷಣ ನೀಡುವ ಕೆಲಸ ಪ್ರತಿ ಮನೆಯಲ್ಲಿ ಆರಂಭವಾಗಬೇಕು. ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು, ಅವರು ದಾರಿ ತಪ್ಪದಂತೆ ಎಚ್ಚರಿಸುವ ಕಾರ್ಯ ಹೆತ್ತವರಿಂದ ತುರ್ತಾಗಿ ಆಗಬೇಕಿದೆ ಎಂದು ಕೇಮಾರು ಸಾಂಧೀಪನಿ ಮಠದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಕಾರ್ಕಳ ತಾಲೂಕಿನ ಪಳ್ಳಿ ಶ್ರೀ ಮಹಾಂಕಾಳಿ ಮಠದಲ್ಲಿ(ಮಂಗಲ್ದಿಮಠ) ಬ್ರಹ್ಮ ಕಲಶೋತ್ಸವದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಎಲ್ಲಿ ಮುಗ್ಧತೆ ಇದೆಯೋ ಅಲ್ಲಿ ದೇವರಿದ್ದಾನೆ. ಮುಗ್ಧತೆಯಿಂದ ಮನಪೂರ್ವಕವಾಗಿ ದೇವರನ್ನು ಪೂಜಿಸಿದಾಗ ನಮ್ಮ ಇಷ್ಟಾರ್ಥಗಳು ನೆರವೇರಲು ಸಾಧ್ಯ ಎಂದು ಸ್ವಾಮೀಜಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ದೈವ, ದೇವಸ್ಥಾನಗಳು ಜೀರ್ಣೋದ್ದಾರಗೊಂಡು ಅಭಿವೃದ್ಧಿ ಕಾಣುತ್ತಿರುವುದು ಒಳ್ಳೆಯ ಬೆಳವಣಿಗೆ. ಗ್ರಾಮೀಣ ಜನತೆ ದೈವಾರಾಧನೆಯ ಚಟುವಟಿಕೆಗಳಿಗೆ ಎಂದೂ ಕಡಿಮೆ ಮಾಡಿದವರಲ್ಲ. ತಮ್ಮ ಸಂಕಷ್ಟದ ನಡುವೆಯೂ ಭಕ್ಕಿ, ಶ್ರದ್ಧೆಯಿಂದ ಆಚರಿಸಿಕೊಂಡು ಬಂದವರು. ಪ್ರಸ್ತುತ ರಾಜ್ಯ ಸರಕಾರ ಕೂಡ ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅನುಗ್ರಹ ಸಂದೇಶ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಾಬುರಾಜೇಂದ್ರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಚಿತ್ರನಟ ಶಿವಧ್ವಜ್, ಪಳ್ಳಿ ಗ್ರಾ.ಪಂ. ಅಧ್ಯಕ್ಷ ಸಂದೀಪ್ ಅಮೀನ್, ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ, ಅಡಪಾಡಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್, ಉದ್ಯಮಿ ಉದಯಕುಮಾರ್ ಶೆಟ್ಟಿ, ಪ್ರಮುಖರಾದ ಬೋಜರಾಜ ಹೆಗ್ಡೆ,ರಮೇಶ್ ಹೆಗ್ಡೆ, ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಪಿ.ಕಿಶನ್ ಹೆಗ್ಡೆ, ಅಧ್ಯಕ್ಷ ರಘುನಾಥ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಬುರಾಜೇಂದ್ರ ಹೆಗ್ಡೆ,ಮಂಗಲ್ದಿ ಮಠ ಆಡಳಿತ ಮೊಕ್ತೇಸರ ಬಾಬುರಾಜ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಗದೀಶ್ ಹೆಗ್ಡೆ ಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!