ಹೊಸ ದಿಗಂತ ವರದಿ, ವಿಜಯಪುರ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬಾರದು. 2 ಎ ಮೀಸಲಾತಿ ನೀಡಿದರೆ ಹಿಂದುಳಿದವರು ನಿರ್ನಾಮ ಆಗುತ್ತಾರೆ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜ್ಯ ಸರ್ಕಾರ ಕೂಡ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡುತ್ತಿದೆ. ಯಾವುದೇ ಕಾರಣಕ್ಕೂ ಮೀಸಲಾತಿ ನೀಡಬಾರದು ಎಂದರು.
ಪಂಚಮಸಾಲಿ ಮಠಗಳಿವೆ. ಅದರಿಂದ ಕೋಟ್ಯಂತರ ವ್ಯವಹಾರಗಳು ನಡೆಯುತ್ತವೆ. ನಮಗೆ ಯಾವುದೇ ಮಠಗಳು ಇಲ್ಲ. ಇದರಿಂದ ನಾವು ಪ್ರಬಲವಾದ ಪಂಚಮಸಾಲಿ ವಿರುದ್ಧ ಹೋರಾಡಲು ಆಗುವುದಿಲ್ಲ ಎಂದರು.
ಶಾಸಕ ಯತ್ನಾಳ ಒಂದು ಸಮಾಜದ ಪರವಾಗಿ ಮಾತನಾಡುವುದು ಸರಿಯಲ್ಲ. ಹಿಂದುತ್ವ ಪರ ಮಾತ್ರ ಬ್ಯಾಟಿಂಗ್ ಮಾಡಬಾರದು. ಒಬ್ಬ ಶಾಸಕನಾಗಿ ಎಲ್ಲ ಧರ್ಮದವರನ್ನು ಸಮನಾಗಿ ಕಾಣಬೇಕು ಎಂದರು.
ಇಲ್ಲದೇ ಹೋದರೆ ಈ ಸಲ ಚುನಾವಣೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.