ಹೊಸದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಯಲ್ಲಿ ಕೊರೋನ ನಿರೋಧಕ ಲಸಿಕೆ ಹಾಕಲು ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕೊರೋನ ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಗೆ ಎರಡೂ ಹಂತ ಸೇರಿ 10 ಲಕ್ಷ ಡೋಸ್ ಲಸಿಕೆ ಬೇಕಾಗುತ್ತದೆ. ಅದರಲ್ಲಿ ಈವರೆಗೆ ಮೊದಲ ಹಂತದಲ್ಲಿ 1.70 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. ಎರಡನೇ ಹಂತದಲ್ಲಿ 18,000 ಡೋಸ್ ಲಸಿಕೆ ಹಾಕಲಾಗಿದೆ. ಇನ್ನೂ ಸುಮಾರು 8 ಲಕ್ಷ ಡೋಸ್ ಲಸಿಕೆ ಅಗತ್ಯವಿದೆ. ಅದಕ್ಕೆ ಕೊರತೆ ಆಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ಯಾರೂ ಕೂಡ ಲಸಿಕೆ ಇಲ್ಲವೆಂದು ಪುನಃ ಪುನಃ ಆಸ್ಪತ್ರೆಗಳಿಗೆ ತಿರುಗಾಡುವ ಸ್ಥಿತಿ ಬರಬಾರದು. ಒಂದೊಮ್ಮೆ ಲಸಿಕೆ ಪಡೆಯಲು ನಾಗರೀಕರು ಬಂದಾಗ ಖಾಲಿ ಆಗಿದ್ದರೆ ಮರುದಿನ ಮೊದಲನೇಯದಾಗಿಯೇ ಅಂತಹವರಿಗೆ ನೀಡಬೇಕು. ಲಸಿಕೆ ಯಾವಾಗ, ಯಾವ ಸಮಯಕ್ಕೆ ದೊರೆಯುತ್ತದೆ ಎಂಬ ಮಾಹಿತಿ ಕೂಡ ತಿಳಿಸಬೇಕು. ಲಸಿಕೆ ಕೊರತೆಯಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮುಡದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 12 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 257 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೊರೋಮ ತಗುಲಿದವರಿಗೂ ಉತ್ತಮ ಚಿಕಿತ್ಸೆ ನೀಡಲು ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧ, ಡಿಹೆಚ್ಒ ಡಾ.ರಾಜೇಶ್ ಸುರುಗಿಹಳ್ಳಿ ಇನ್ನಿತರರು ಇದ್ದರು.