ಹೊಸದಿಗಂತ ವರದಿ ಹುಬ್ಬಳ್ಳಿ:
ತಾಲೂಕಿನಲ್ಲಿ ಸತತ ಎರಡು ದಿನದಿಂದ ಮಳೆ ಎಡಬಿಡದೆ ಸುರಿಯುತ್ತಿರುವುದರಿಂದ ಜನಜೀವ ಅಸ್ತವ್ಯಸ್ಥವಾಗಿದ್ದು, ಹುಬ್ಬಳ್ಳಿ ನಗರದ ಹಲವು ಮನೆಗಳಿಗೆ ನೀರು ಸೇರಿದೆ.
ನಗರದ ಪ್ರಮುಖ ಉಣಕಲ್ ಕೆರೆ ಕೊಡಿ ಹರಿದ ಕಾರಣ ನಾಲಾ ಸುತ್ತಮುತ್ತ ಇರುವ ಮನೆಗಳಿಗೆ ನೀರು ಸೇರುವ ಆತಂಕ ಶುರುವಾಗಿದೆ. ನಗರದ ರಸ್ತೆಗಳು ಜಲಾವೃತವಾಗಿ ಒಳಚರಂಡಿ ತುಂಬಿ ಹತಿಯುತ್ತಿವೆ. ಹಳೆ ಹುಬ್ಬಳ್ಳಿ ಗಣೇಶನಗರದ, ಆರ್.ಜಿಎಸ್, ಉಣಕಲ್, ದೇವಿನಗರ, ಗೋಪನಕೊಪ್ಪ, ಬೆಂಗೇರಿ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ನೀರು ಸೇರಿ ಜನಸಾಮಾನ್ಯರಿಗೆ ಸಮಸ್ಯೆ ಎದುರಾಗಿದೆ. ನೀರು ಸೇರಿದ ಮನೆ ಕುಟುಂಬಸ್ಥರು ನೀರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಸಮಸ್ಯೆ ಕುರಿತು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು ಸಹ ಇತ್ತ ಯಾರೋಬ್ಬರು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಗ್ರಾಮೀಣ ಭಾಗದಲ್ಲಿ ಅತಿಯಾದ ಮಳೆಯಿಂದ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಹೊಲಗಳಲ್ಲಿ ನೀರು ನಿಂತಿರುವ ದೃಶ್ಯಗಳು ಕಂಡು ಬಂದವು. ಹಲವು ಮಣ್ಣಿನ ಮನೆಗಳು ಭಾಗಶಃ ಮತ್ತು ಪೂರ್ಣ ಪ್ರಮಾಣದಲ್ಲಿ ಜಲಾವೃತವಾಗಿದೆ.