ಹೊಸದಿಗಂತ ಡಿಜಿಟಲ್ ಡೆಸ್ಕ್ :
ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಪೈಲಟ್ (Pilot) ಅವರನ್ನು ಬಲಿಪಶು ಮಾಡಲಾಗಿದೆ ಎಂದು ಏರ್ ಇಂಡಿಯಾ (Air India) ಪೈಲಟ್ ಒಕ್ಕೂಟ ಹೇಳಿದೆ.
ಶಂಕರ್ ಮಿಶ್ರಾ ಎಂಬಾತ ಕುಡಿದ ಅಮಲಿನಲ್ಲಿ ವೃದ್ಧ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ಈ ಸಂಬಂಧ ನ್ಯೂಯಾರ್ಕ್-ನವದೆಹಲಿ ವಿಮಾನದ ಪೈಲಟ್ ಅವರ ಪರವಾನಗಿಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) 3 ತಿಂಗಳ ಕಾಲ ಅಮಾನತುಗೊಳಿಸಿದೆ.
ಇದೀಗ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಒಕ್ಕೂಟ, ಪೈಲಟ್ ತ್ವರಿತವಾಗಿ ಮತ್ತು ಪ್ರಬುದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಘಟನೆಯ ಬಗ್ಗೆ ಅಂದೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡದೇ ಇದ್ದರೂ ಪೈಲಟ್ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಘಟನೆ 2022ರ ನವೆಂಬರ್ 26ರಂದು ನಡೆದಿತ್ತು. ಡಿಜಿಸಿಎ ಏರ್ ಇಂಡಿಯಾ ಕಂಪನಿಗೆ 30 ಲಕ್ಷ ರೂ. ದಂಡ ವಿಧಿಸಿದೆ. ಅಂದು ವಿಮಾನದ ವಾಚ್ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್ ಸೇವೆಗಳ ನಿರ್ದೇಶಕರ ಮೇಲೆ 3 ಲಕ್ಷ ರೂ. ದಂಡವನ್ನೂ ವಿಧಿಸಿದೆ.