ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಂಕಾಕ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರನ್ನು ಭೇಟಿ ಮಾಡಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ನಂತರ ಉಭಯ ನಾಯಕರ ಮೊದಲ ಭೇಟಿ ಇದಾಗಿದ್ದು, ಈ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಬಂಗಾಳ ಕೊಲ್ಲಿ ಬಹು-ವಲಯ ಮತ್ತು ತಾಂತ್ರಿಕ ಸಹಕಾರ (BIMSTEC) ಗುಂಪಿನ ನಾಯಕರ ಶೃಂಗಸಭೆಯ ಹೊರಗೆ ಉಭಯ ನಾಯಕರು ಭೇಟಿ ಮಾಡಿದ್ದಾರೆ.
ಕಳೆದ ವಾರ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮೊಹಮ್ಮದ್ ಯೂನುಸ್, ಚೀನಾ ತನ್ನ ಆರ್ಥಿಕ ಪ್ರಭಾವವನ್ನು ಬಾಂಗ್ಲಾದೇಶಕ್ಕೆ ವಿಸ್ತರಿಸುವಂತೆ ಒತ್ತಾಯಿಸಿದ್ದರು. ಭಾರತದ ಏಳು ಈಶಾನ್ಯ ರಾಜ್ಯಗಳು ಭೂಆವೃತ ಪ್ರದೇಶವಾಗಿದ್ದು, ಸಾಗರವನ್ನು ತಲುಪಲು ಯಾವುದೇ ಮಾರ್ಗವಿಲ್ಲ, ನಮಗೆ ಅಡ್ಡಿಯಾಗಿದೆ ಎಂದು ಹೇಳಿದ್ದರು.