ಹೊಸದಿಗಂತ ಡಿಜಿಟಲ್ ಡೆಸ್ಕ್
ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ್ದ ಪೋಲೆಂಡ್ ದೇಶದ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ.
ಬಂಧಿತನನ್ನು ಪೋಲೆಂಡ್ ನಿವಾಸಿ ವ್ಲಾಡಿಸ್ಲಾ(39 ವರ್ಷ) ಎಂದು ಗುರುತಿಸಲಾಗಿದೆ. ಅಕ್ರಮವಾಗಿ ದೇಶದೊಳಕ್ಕೆ ಪ್ರವೇಶಿಸಿದ್ದಕ್ಕಾಗಿ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ವೇದಾರಣ್ಯಂ ಬಳಿ ಆತನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಪೋಲಿಷ್ ಪ್ರಜೆ ರಬ್ಬರ್ ಬೋಟ್ ಬಳಸಿಕೊಂಡು ಶ್ರೀಲಂಕಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದಾನೆ ಎಂದು ವರದಿಗಳು ತಿಳಿಸಿವೆ.
ಈತ 2019 ರಲ್ಲಿ ಶ್ರೀಲಂಕಾಕ್ಕೆ ಪ್ರವಾಸಕ್ಕೆ ಹೋಗಿದ್ದ. ಆ ವೇಳೆ ಕುಡಿದು ಜಗಳವಾಡಿದ್ದಕ್ಕೆ ಆತನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದರು. ಆ ವೇಳೆ ಆತನ ಪಾಸ್ಪೋರ್ಟ್ ಅನ್ನು ಜಪ್ತಿ ಮಾಡಿದ್ದಾರೆ. ಶ್ರೀಲಂಕಾದಲ್ಲಿ ಕೋವಿಡ್ ಮತ್ತು ಆರ್ಥಿಕ ಬಿಕ್ಕಟ್ಟಿನ ಕಾರಣ ಆತನಿಗೆ ತನ್ನ ಪಾಸ್ಪೋರ್ಟ್ ಮರಳಿ ಪಡೆಯಲು ಸಾಧ್ಯವಾಗಿಲ್ಲ.
ಅದಕ್ಕಾಗಿ ಶ್ರೀಲಂಕಾದಿಂದ ಪೊಲೀಸರ ಕಣ್ಣು ತಪ್ಪಿಸಿ ರಬ್ಬರ್ ಬೋಟ್ ನಲ್ಲಿ ಸಮುದ್ರಮಾರ್ಗವಾಗಿ ಭಾರತಕ್ಕೆ ಬಂದಿದ್ದಾನೆ. ಆತ ಭಾರತದಲ್ಲಿ ಪೋಲೆಂಡ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಅಲ್ಲಿಂದ ತನ್ನ ದೇಶವನ್ನು ತಲುಪಲು ಪ್ರಯತ್ನಿಸುತ್ತಿದ್ದ ಎಂಬ ಮಾಹಿತಿ ತಿಳಿದುವಬಂದಿದೆ. ವೇದಾರಣ್ಯಂ ಪಟ್ಟಣದ ಬಳಿ ವಿದೇಶಿಗನೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ತಮಿಳುನಾಡು ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.