ಹೊಸದಿಗಂತ ಡಿಜಿಟಲ್ ಡೆಸ್ಕ್:
ʼವಿಶ್ವದ ಅತ್ಯಂತ ಭಯಾನಕ ಭಯೋತ್ಪಾದಕರ ವಿರುದ್ಧ ಕ್ರಮವಹಿಸುವ ಸಂದರ್ದಲ್ಲಿಯೂ ರಾಜಕೀಯದ ಮೂಲಕ ಅವರಿಗೆ ರಕ್ಷಣೆ ನೀಡಲಾಗುತ್ತಿದೆ ಎಂಬುದು ವಿಷಾದನೀಯʼ ಎಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತವು ಹೇಳಿದೆ. ಆ ಮೂಲಕ ಪಾಕಿಸ್ತಾನ ಮೂಲದ ಉಗ್ರರನ್ನು ಕಪ್ಪು ಪಟ್ಟಿಗೆ ಸೇರಿಸಿ ನಿಷೇಧ ಹೇರುವುದಕ್ಕೆ ಹಲವು ಸಂದರ್ಭಗಳಲ್ಲಿ ಅಡ್ಡಗಾಲು ಹಾಕುತ್ತಿರುವ ಚೀನಾಗೆ ಪರೋಕ್ಷ ಚಾಟಿ ಬೀಸಿದೆ.
“ಶಾಂತಿ ಮತ್ತು ನ್ಯಾಯವನ್ನು ಭದ್ರಪಡಿಸುವ ದೊಡ್ಡ ಅನ್ವೇಷಣೆಗೆ ಭಯೋತ್ಪಾದನೆಯ ವಿರುದ್ಧದ ಹೋರಾಟವು ನಿರ್ಣಾಯಕವಾಗಿದೆ. ಭದ್ರತಾ ಮಂಡಳಿಯು ಈ ಕುರಿತು ನಿಸ್ಸಂದಿಗ್ಧವಾದ ಮತ್ತು ಸ್ಪಷ್ಟ ಎಚ್ಚರಿಕೆ ಸಂದೇಶವನ್ನು ಕಳುಹಿಸಬೇಕು” ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಗ್ರಹಿಸಿದ್ದಾರೆ. ವಿಶ್ವಸಂಸ್ಥೆಯ ಉನ್ನತ ಮಟ್ಟದ 77 ನೇ ಅಧಿವೇಶನಕ್ಕಾಗಿ ಯುನ್ ಪ್ರಧಾನ ಕಚೇರಿಗೆ ತೆರಳಿದ್ದು ಗುರುವಾರ ನಡೆದ 15 ರಾಷ್ಟ್ರಗಳನ್ನೊಳಗೊಂಡ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಚೀನಾದ ಅಡ್ಡಗಾಲಿಗೆ ಭಾರತದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತುಕಾಮನ್ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಮತ್ತು ಇತರ ಯುಎನ್ಎಸ್ಸಿಯ ವಿದೇಶಾಂಗ ಮಂತ್ರಿಗಳು ಹಾಜರಿದ್ದ ಈ ಸಭೆಯಲ್ಲಿ ಮಾತನಾಡಿದ ಜೈ ಶಂಕರ್ “ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ರಾಜಕೀಯವು ಎಂದಿಗೂ ರಕ್ಷಣೆ ನೀಡಬಾರದು ಅಥವಾ ವಾಸ್ತವವಾಗಿ ಶಿಕ್ಷೆಯನ್ನು ಸುಲಭಗೊಳಿಸಲು ಕೂಡ ಸಹಾಯ ಮಾಡಬಾರದು. ಆದರೆ ಈ ಸಭೆಯಲ್ಲಿ ವಿಶ್ವದ ಅತ್ಯಂತ ಭಯಾನಕ ಭಯೋತ್ಪಾದಕರನ್ನು ಅನುಮೋದಿಸುವ ವಿಷಯದಲ್ಲಿ ತಡವಾಗುತ್ತಿರುವುದು ವಿಷಾದನೀಯ ಸಂಗತಿ” ಎಂದು ಚೀನಾವನ್ನು ಕುಟುಕಿದ್ದಾರೆ.
“ಹಾಡಹಗಲಲ್ಲೇ ಮಾಡಿದ ಅತಿರೇಕದ ದಾಳಿಗಳನ್ನು ಶಿಕ್ಷಿಸದೆ ಬಿಡಲಾಗುತ್ತಿದೆ, ಈ ರೀತಿಯ ಭಯೋತ್ಪಾದನೆಯ ವಿರುದ್ಧ ಸ್ಪಷ್ಟದಿಂದ ಈ ಮಂಡಳಿಯು ಸಂದೇಶ ಕಳಿಸುವಣತಾಗಬೇಕು. ನಾವು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕಾದರೆ ಸ್ಥಿರತೆ ಇರಬೇಕು” ಎಂದೂ ಜೈಶಂಕರ್ ತಮ್ಮ ಮಾತಿನ ವೇಳೆ ಉಲ್ಲೇಖಿಸಿದ್ದಾರೆ.