ರಾಜಕೀಯ ಬಿಟ್ಟರೂ ಮಂಡ್ಯ ಮಾತ್ರ ಬಿಡಲ್ಲ: ಸಂಸದೆ ಸುಮಲತಾ ಸ್ಪಷ್ಟನೆ

ಹೊಸ ದಿಗಂತ ವರದಿ, ಮದ್ದೂರು :

ಅಂಬರೀಶ್ ಅವರ ಕರ್ಮಭೂಮಿ ಹಾಗಾಗಿ ರಾಜಕೀಯ ಬಿಟ್ಟರೂ ಮಂಡ್ಯ ಬಿಡಲ್ಲ ಎಂದು ಸಂಸದೆ ಸುಮಲತಾ ಸ್ಪಷ್ಟಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಕ್ಷೇತ್ರ ಹುಡುಕುತ್ತಿರೋರು ಯಾರು ಅಂತ ಗೊತ್ತಿಲ್ಲ. ಸುಮಲತಾ ಮಂಡ್ಯ ಬಿಟ್ಟು ಹೋಗುತ್ತಾರೆ ಅಂತ ಒಂದಷ್ಟು ಜನ ಕನಸು ಕಾಣುತ್ತಿದ್ದಾರೆ. ನಾನು ಕ್ಷೇತ್ರ ಬಿಟ್ಟು ಹೋಗಲ್ಲ ಎನ್ನುವು ಅವರ ಕನಸಿಗೆ ನೀರು ಚೆಲ್ಲಿದಂತಾಗಿರಬಹುದು ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
ನಾನು ರಾಜಕೀಯಕ್ಕೆ ಬಂದಿರುವುದು ಮಂಡ್ಯಕ್ಕೋಸ್ಕರ. ರಾಜಕೀಯದಿಂದ ಏನೇನೋ ಆಗಲು ಬಂದಿಲ್ಲ. ರಾಜಕೀಯದಲ್ಲಿ ಬೇಕಿದ್ರೆ ಇಂದು ಇರುತ್ತೇನೆ. ನಾಳೆ ಬಿಡುತ್ತೇನೆ, ಆದರೆ ಮಂಡ್ಯ ಮಾತ್ರ ಬಿಡಲ್ಲ ಎಂದು ಸ್ಪಷ್ಟಪಡಿಸಿದರು.

ಯಾರನ್ನೂ ನೋಯಿಸಬಾರದು
ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ನನ್ನನ್ನು ಬೆಂಬಲಿಸಿದ್ದಾರೆ. ಯಾರ ಪರ, ವಿರೋಧ ಎಂಬ ಧೋರಣೆ ಅನುಸರಿಸದೆ ತಟಸ್ಥವಾಗಿರುವುದು ಒಳ್ಳೆಯದು. ಯಾರಿಗೂ ಕೂಡ ನೋಯಿಸಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಧಾನ ಸಭಾ ಚುನಾವಣೆಯಲ್ಲಿ ನಾನೇನು ಸ್ಪರ್ಧಿಸುವುದಿಲ್ಲ. ನಾನು ಯಾರಿಗೆ ಬೆಂಬಲ ಕೊಡಬೇಕು ಎನ್ನುವುದು ಮುಂದೆ ನೋಡೋಣ. ಇನ್ನೂ ಯಾರ್ಯಾರು ಕ್ಯಾಂಡಿಡೇಟ್ಸ್ ಎನ್ನುವುದೇ ಗೊತ್ತಿಲ್ಲ. ಈಗಲೇ ನಾನು ಯಾರಿಗೆ ಅಂತ ಬೆಂಬಲ ಸೂಚಿಸಲಿ ಎಂದು ಪ್ರಶ್ನಿಸಿದರು.

ಅಭಿಯದ್ದೇ ನಿರ್ಧಾರ
ರಾಜಕೀಯಕ್ಕೆ ಬರಬೇಕೋ ಬೇಡವೋ ಎಂಬುದನ್ನು ಅಭಿಷೇಕ್ ಅಂಬರೀಶ್ ಅವರೇ ನಿರ್ಧರಿಸುತ್ತಾರೆ. ಇದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈಗ ಸಧ್ಯಕ್ಕೆ ಅವನು ಎರಡು ಮೂರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾನೆ. ಅವರ ರಾಜಕೀಯ ಭವಿಷ್ಯವನ್ನು ಅವನೇ ಡಿಸೈಡ್ ಮಾಡಬೇಕು ಎಂದು ಉತ್ತರಿಸಿದರು.

ಮೈಲೇಜ್‌ಗಾಗಿ ಆರೋಪ :
ನಲ್ವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಶಾಸಕ, ಮಂತ್ರಿ, ಸಂಸದರು ಎಲ್ಲವೂ ಆಗಿದ್ದಾರೆ. ಆದರೂ ಅಭಿವೃದ್ಧಿ ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ನನ್ನ ಬಗ್ಗೆ ಮಾತನಾಡಿದರೆ ಮಾಧ್ಯಮಗಳಲ್ಲಿ ಒಳ್ಳೆಯ ಮೈಲೇಜ್ ಬರುತ್ತದೆ ಎಂಬ ಕಾರಣಕ್ಕೆ ಹೀಗೆಲ್ಲಾ ಮಾತನಾಡುತ್ತಿರಬಹುದು ಎಂದು ಜೆಡಿಎಸ್ ಶಾಸಕರ ವಿರುದ್ಧ ಹರಿಹಾಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!