ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ರಾಜ್ಯದ ಶಾಲಾ- ಕಾಲೇಜುಗಳ ಆವರಣದಲ್ಲಿ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗಗಳ ಸ್ಥಳಾಂತರಕ್ಕೆ ಇಂಧನ ಇಲಾಖೆ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದೆ. ಒಟ್ಟು 1783 ಅಪಾಯಕಾರಿ ಮಾರ್ಗಗಳನ್ನು ತೆರವುಗೊಳಿಸಿ ಹೊಸ ಮಾರ್ಗಕ್ಕೆ ವ್ಯವಸ್ಥೆ ಕಲ್ಪಿಸಿದೆ.
ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿರುವ ಇಂಧನ ಸಚಿವ ವಿ.ಸುನೀಲ್ ಕುಮಾರ್, ಬಾಕಿ ಉಳಿದಿರುವ ಅಪಾಯಕಾರಿ ಮಾರ್ಗಗಳ ಬದಲಾವಣೆಯನ್ನು ಅತಿ ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ಆಗಸ್ಟ್ 15ರಂದು ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನಡೆಸುವಾಗ ಶಾಲಾ ಆವರಣದಲ್ಲಿ ಹಾದು ಹೋಗಿದ್ದ ಅಪಾಯಕಾರಿ ವಿದ್ಯುತ್ ಮಾರ್ಗಕ್ಕೆ ಧ್ವಜ ತಗುಲಿ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದರು. ಹಾಸನದಲ್ಲೂ ಇದೇ ಬಗೆಯ ಘಟನೆ ನಡೆದಿತ್ತು. ಶಾಲಾ- ಕಾಲೇಜು ಆವರಣದಲ್ಲಿ ಹಾದಿ ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗಗಳಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ರಾಜ್ಯಾದ್ಯಂತ ಕಳವಳ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದ ಸಚಿವ ಸುನೀಲ್ ಕುಮಾರ್ ತುರ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಶಾಲಾ- ಕಾಲೇಜು ಆವರಣದಲ್ಲಿ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗ ಗುರುತಿಸಿ, ಬದಲಿ ಮಾರ್ಗ ಕಲ್ಪಿಸುವ ಅಥವಾ ಎಬಿ ಕೇಬಲ್ ಅಳವಡಿಸುವಂತೆ ಆ. 19ರಂದು ಎಲ್ಲ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚನೆ ನೀಡಲಾಗಿತ್ತು.
ರಾಜ್ಯದಲ್ಲಿ ಒಟ್ಟು 6886 ಇಂಥ ಅಪಾಯಕಾರಿ ಮಾರ್ಗಗಳು ಶಾಲಾ- ಕಾಲೇಜು ಆವರಣದಲ್ಲಿ ಹಾದು ಹೋಗಿರುವುದನ್ನು ಗುರುತಿಸಲಾಗಿತ್ತು. ಆದೇಶ ನೀಡಿದ ಮೂರೇ ತಿಂಗಳಲ್ಲಿ 1783 ಮಾರ್ಗಗಳನ್ನು ಬದಲಿಸಿ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನುಳಿದ 4997 ಮಾರ್ಗಗಳ ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ ₹ 114.5 ಕೋಟಿಯನ್ನು ಇಂಧನ ಇಲಾಖೆ ವೆಚ್ಚ ಮಾಡುತ್ತಿದೆ.
ಬೆಸ್ಕಾಂ ವ್ಯಾಪ್ತಿಯಲ್ಲೇ ಹೆಚ್ಚು
ಬೆಸ್ಕಾಂ ವ್ಯಾಪ್ತಿಯಲ್ಲೇ ಇಂಥ ಅತಿ ಹೆಚ್ಚು ಮಾರ್ಗಗಳು ಕಂಡು ಬಂದಿದ್ದು 2299 ಸ್ಥಳ ಗುರುತಿಸಲಾಗಿದೆ. ಈ ಪೈಕಿ 157 ಕಡೆ ಹೊಸ ಮಾರ್ಗ ಅಳವಡಿಸಲಾಗಿದ್ದು, 2147 ಮಾರ್ಗ ಬದಲಾವಣೆ ಪ್ರಗತಿಯಲ್ಲಿದೆ. ಚೆಸ್ಕಾಂ ವ್ಯಾಪ್ತಿಯ 881ರ ಪೈಕಿ 809, ಮೆಸ್ಕಾಂನ 1323ರ ಪೈಕಿ 116, ಹೆಸ್ಕಾಂನ 1721ರ ಪೈಕಿ 228 ಹಾಗೂ ಜೆಸ್ಕಾಂ ವ್ಯಾಪ್ತಿಯ 662ರ ಪೈಕಿ 473 ಅಪಾಯಕಾರಿ ಮಾರ್ಗಗಳನ್ನು ಸರಿಪಡಿಸಲಾಗಿದೆ. ಉಳಿದ 4997 ಮಾರ್ಗಗಳಿಗೆ ಸದ್ಯದಲ್ಲೇ ಕಾಯಕಲ್ಪ ಸಿಗಲಿದೆ. ಇಂಧನ ಇಲಾಖೆಯ ಈ ಕ್ರಮದಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.