January19, 2026
Monday, January 19, 2026
spot_img

ಅಧಿಕಾರಕ್ಕೆ ಅದೃಷ್ಟವಿರಬಹುದು, ಗೌರವಕ್ಕೆ ಜ್ಞಾನವೇ ಮಾನದಂಡ: ಚಲುವರಾಯಸ್ವಾಮಿ ಮಾರ್ಮಿಕ ನುಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಾಜದಲ್ಲಿ ಸರ್ಕಾರಿ ಅಥವಾ ರಾಜಕೀಯ ಹುದ್ದೆಗಳು ಕೇವಲ ಅರ್ಹತೆಯಿಂದ ಮಾತ್ರವಲ್ಲ, ಕೆಲವೊಮ್ಮೆ ಸಮಯ ಮತ್ತು ಸಂದರ್ಭಗಳಿಂದಲೂ ಲಭಿಸುತ್ತವೆ. ಆದರೆ, ನಿಜವಾದ ಗೌರವ ಮತ್ತು ಮನ್ನಣೆ ಸಿಗುವುದು ವ್ಯಕ್ತಿಯ ಜ್ಞಾನ ಹಾಗೂ ಪ್ರತಿಭೆಯಿಂದ ಮಾತ್ರ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಹಾಗೂ ಕೃಷಿ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಡಾ. ಎ.ಬಿ. ಪಾಟೀಲ್ ಅವರ ಅಭಿನಂದನಾ ಗ್ರಂಥ ‘ಅಶೋಕ ವೃಕ್ಷ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭೂಮಿಯ ಮೇಲೆ ಜನಿಸಿದ ಎಲ್ಲರಿಗೂ ಒಂದಲ್ಲ ಒಂದು ಅವಕಾಶಗಳು ಸಿಗುತ್ತವೆ. ಅರ್ಹತೆಯೂ ಇರುತ್ತದೆ, ಆದರೆ ಸಿಕ್ಕ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಡಾ. ಎ.ಬಿ. ಪಾಟೀಲ್ ಅವರು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿದ್ದಾರೆ. ಸುಖಾಸುಮ್ಮನೆ ಯಾರೂ ಸಂಶೋಧಕ ಎನಿಸಿಕೊಳ್ಳಲು ಸಾಧ್ಯವಿಲ್ಲ. ರೈತರಿಗೆ ಅನುಕೂಲವಾಗುವ ಕೆಲಸ ಮಾಡಿದಾಗ ಮಾತ್ರ ಅಂತಹ ಗೌರವ ಲಭಿಸುತ್ತದೆ. ಕೃಷಿ ಇಲಾಖೆ ಮತ್ತು ವಿಶ್ವವಿದ್ಯಾಲಯ ಎದುರಿಸುತ್ತಿದ್ದ ಅನೇಕ ತಾಂತ್ರಿಕ ಸಮಸ್ಯೆಗಳಿಗೆ ಪಾಟೀಲ್ ಅವರು ತಮ್ಮ ಜ್ಞಾನದ ಮೂಲಕ ಉತ್ತಮ ಸಲಹೆ ಹಾಗೂ ಪರಿಹಾರಗಳನ್ನು ನೀಡಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.

Must Read