ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರ “ಮನ್ ಕಿ ಬಾತ್” ಬಾನುಲಿ ಕಾರ್ಯಕ್ರಮ 100ನೇ ಆವೃತ್ತಿಯನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಪ್ರಸಾರ ಭಾರತಿ ನವದೆಹಲಿಯಲ್ಲಿ “ಮನ್ ಕಿ ಬಾತ್ 100″ರ ಸಮಾವೇಶವನ್ನು ಆಯೋಜಿಸಿದೆ. ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಒಂದು ದಿನದ ಈ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಮಾತನಾಡಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮನ್ ಕಿ ಬಾತ್ 100ನೇ ಆವೃತ್ತಿಯ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ಪ್ರಮುಖ ವಿಚಾರಗಳಾದ ನಾರಿ ಶಕ್ತಿ, ವಿರಾಸತ್ ಕಾ ಉತ್ಥಾನ್(ಪರಂಪರೆಯ ಮೇಲಿನ ಹೆಮ್ಮೆ), ಜನ ಸಂವಾದದಿಂದ ಆತ್ಮನಿರ್ಭರತೆ ಮತ್ತು ಆವಾಹನೆಯಿಂದ ಆಂದೋಲನದ ಬಗ್ಗೆ ಚರ್ಚೆ, ವಿಚಾರ ಸಂಕಿರಣವು ನಡೆಯಲಿದೆ.
ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರಾದ ಆಮೀರ್ ಖಾನ್, ರವೀನಾ ಟಂಡನ್, ಪುದುಚೇರಿ ನಿವೃತ್ತ ಲೆ.ಗವರ್ನರ್ ಕಿರಣ್ ಬೇಡಿ, ಸಂಗೀತ ಸಂಯೋಜಕ ರಿಕಿ ಕೇಜ್, ಕ್ರೀಡಾಳುಗಳಾದ ನಿಖತ್ ಝರೀನ್, ದೀಪಾ ಮಲಿಕ್, ಉದ್ಯಮಿ ಟಿ.ವಿ.ಮೋಹನ್ದಾಸ್ ಪೈ ಸೇರಿದಂತೆ ಮನ್ ಕಿ ಬಾತ್ನ ವಿವಿಧ ಆವೃತ್ತಿಗಳಲ್ಲಿ ಪ್ರಸ್ತಾಪಿಸಲ್ಪಟ್ಟ 100ಕ್ಕೂ ಅಧಿಕ ವ್ಯಕ್ತಿಗಳು ಭಾಗವಹಿಸಲಿದ್ದಾರೆ.