ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಹುಲ್ ಗಾಂಧಿ ಮಾದರಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ (Prashanth Sambargi) ವಿರುದ್ಧವೂ ದೂರು ದಾಖಲಾಗಿದೆ.
ಆದ್ರೆ ಇಲ್ಲಿ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಹಿನ್ನೆಲೆ ಅವರ ಮೇಲೆ ಜೆಡಿಎಸ್ ದೂರು ದಾಖಲಿಸಿದೆ.
ಟ್ವಿಟ್ಟರ್ ಹಾಗೂ ಫೇಸ್ ಬುಕ್ನಲ್ಲಿ ಅವಹೇಳನಕಾರಿಯಾಗಿ ಬರೆದಿರುವ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಕಾನೂನು ಘಟಕದ ಎ.ಪಿ.ರಂಗನಾಥ್, ವಕ್ತಾರ ಗಂಗಾಧರ್ ಮೂರ್ತಿ ಸೇರಿ ಹಲವರು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರಿಗೆ ದೂರು ಸಲ್ಲಿಸಿದ್ದಾರೆ.
ಇತ್ತ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಟ್ವಿಟರ್ ಮೂಲಕ ಕ್ಷಮೆ ಕೋರಿದ ಪ್ರಶಾಂತ್ ಸಂಬರಗಿ, “ನನ್ನ ತಂದೆ ಸಮಾನರಾದ ದೇವೆಗೌಡ್ರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಒಂದು ಉದಾರಣೆಯಾಗಿ ದೇವೆ ಗೌಡ ಎಂದು ಹೆಸರನ್ನು ಬಳಸಿದೆ ಹೊರತು ಯಾವುದೇ ದುರುದ್ವೇಷ ವಿರಲಿಲ್ಲ. ಇದು ಯಾವುದೇ ರೀತಿಯಲ್ಲೂ ಅವರ ಗೌರವಕ್ಕೆ ಚುತ್ತಿ ತರಲು ಬಳಸಲಿಲ್ಲ. ಇದರಿಂದ ಯಾರಿಗಾದರೂ ಅಸಮಾಧಾನವಾಗಿದ್ದರೆ ನನ್ನ ಕಳ ಕಳಿಯ ಕ್ಷಮೆ ವಿರಲಿ, ಪೋಸ್ಟ್ ಅನ್ನು ಅಳಿಸಲಾಗಿದೆ ಮತ್ತು ವಿಷಾದಕರವಾಗಿದೆಎಂದು ಬರೆದುಕೊಂಡಿದ್ದಾರೆ.
ಪ್ರಶಾಂತ್ ಸಂಬರಗಿ ಹಾಕಿದ ಪೋಸ್ಟ್ನಲ್ಲಿ ಏನಿದೆ?
ಮೋದಿ ಉಪಮಾನದ ಬಗ್ಗೆ ಅವಹೇಳನ ಮಾಡಿದ ಪ್ರಕರಣವನ್ನೇ ಮುಂದಿಟ್ಟುಕೊಂಡು ಪೋಸ್ಟ್ ಮಾಡಿದ ಪ್ರಶಾಂತ್ ಸಂಬರಗಿ “ಈ ಕೇಸ್ ಬಗ್ಗೆ ಸಿಂಪಲ್ ಆಗಿ ಹೇಳಬೇಕು ಎಂದರೆ, ದೇವೇಗೌಡ ಕಳ್ಳ ಅನ್ನೋದಕ್ಕೂ, ಗೌಡರು ಅನ್ನೋರೆಲ್ಲ ಕಳ್ಳರೇ ಯಾಕಿರುತ್ತಾರೆ ಅನ್ನೋದಕ್ಕೂ ವ್ಯತ್ಯಾಸ ಇದೆ. ಮೊದಲನೆಯದ್ದಕ್ಕೆ ದೇವೇಗೌಡರು ಕೇಸ್ ಹಾಕಬೇಕು, ಎರಡನೆಯದ್ದಕ್ಕೆ ಅವನ ಮಗನೋ ಮೊಮ್ಮಗನೋ ಅಥವಾ ಯಾರಾದರೂ ಗೌಡ ಕೇಸ್ ಹಾಕಬಹುದು ಎಂದು ಬರೆದು “ಸುಮ್ಮನೆ ಒಂದು ಉದಾಹರಣೆ ಕೊಟ್ಟೆ ಅಷ್ಟೆ, ಸೀರಿಯಸ್ ಆಗಿ ತಗೊಳಬೇಡಿ” ಎಂದಿದ್ದರು.