ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ಆಯ್ಕೆಗೋಸ್ಕರ ಇಂದು ದೇಶದೆಲ್ಲೆಡೆ ಚುನಾವಣೆ ನಡೆಯುತ್ತಿದ್ದು, ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ.
ಈಗಾಗಲೇ ಪ್ರಧಾನಿ ಮೋದಿ, ಸೋನಿಯಾ ಗಾಂಧಿ ಸಹಿತ ಅನೇಕರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಇದರ ಮಧ್ಯೆ ವಿಪಕ್ಷಗಳ ಶಾಸಕರು ಎನ್ಡಿಎ ಅಭ್ಯರ್ಥಿ ಪರವಾಗಿ ಮತ ಚಲಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಗುಜರಾತ್ನ ಎನ್ಸಿಪಿ ಶಾಸಕ ಕಂಧಲ್ ಜಡೇಜಾ ದ್ರೌಪದಿ ಮುರ್ಮು ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ. ಈ ಕುರಿತು ಅವರೇ ಖುದ್ದಾಗಿ ಹೇಳಿಕೊಂಡಿದ್ದಾರೆ. ಇನ್ನೂ ಭಾರತೀಯ ಬುಡಕಟ್ಟು ಪಕ್ಷದ ನಾಯಕ ಛೋಟುಭಾಯಿ ವಾಸನ್ ಕೂಡ ಮುರ್ಮು ಪರವಾಗಿ ಮತ ಚಲಾವಣೆ ಮಾಡಿದ್ದಾರೆ.
ಉತ್ತರ ಪ್ರದೇಶ ಬರೇಲಿಯ ಸಮಾಜವಾದಿ ಪಕ್ಷದ ಶಾಸಕ ಶಹಜೀಲ್ ಇಸ್ಲಾಂ ಸಹ ಅಡ್ಡ ಮತದಾನ ಮಾಡಿದ್ದು, ದ್ರೌಪದಿ ಮುರ್ಮು ಅವರಿಗೆ ವೋಟ್ ಹಾಕಿದ್ದಾರೆ.
ಒಡಿಶಾದ ಕಾಂಗ್ರೆಸ್ ಶಾಸಕ ಮೊಹಮ್ಮದ್ ಮೊಕ್ವಿಮ್ ಎನ್ಡಿಯ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಪರ ವೋಟ್ ಮಾಡಿದ್ದಾರೆ. ಆದರೆ ವಿಪಕ್ಷಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಯಶವಂತ್ ಸಿನ್ಹಾಗೆ ಬೆಂಬಲ ಘೋಷಣೆ ಮಾಡಿವೆ. ಆದರೂ ಅವರ ಶಾಸಕರು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತದಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.