ಹೊಸ ದಿಗಂತ ವರದಿ, ಬೀದರ್:
ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನಾಚರಣೆಯ ನಿಮಿತ್ತ ಪಕ್ಷದ ಔರಾದ ಮಂಡಲ ವತಿಯಿಂದ ಆಯೋಜಿಸಲಾದ ಸೇವೆ ಹಾಗೂ ಸಮರ್ಪಣೆ ಅಭಿಯಾನಕ್ಕೆ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಕಮಲನಗರ ತಾಲ್ಲೂಕಿನ ಡೋಣಗಾಂವ್(ಎಂ) ಗ್ರಾಮದ ಮಾಳಪಯ್ಯಾ ದೇವಸ್ಥಾನದ ಆವರಣದಲ್ಲಿ ಸೆ.17ರಂದು ಚಾಲನೆ ನೀಡಿದರು.
ಬಳಿಕ ದೇವಸ್ಥಾನದ ಆವರಣದಲ್ಲಿ ಪಕ್ಷದ ಕಾರ್ಯಕರ್ತರು ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಕೈಯಲ್ಲಿ ಸ್ವತಃ ಪೊರಕೆ ಹಿಡಿದು ಸ್ವಚ್ಛತಾ ಕೆಲಸದಲ್ಲಿ ಭಾಗವಹಿಸುವ ಮೂಲಕ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದರು.
ಬಳಿಕ ಮಾತನಾಡಿದ ಸಚಿವರು, ಭಾರತೀಯ ಜನತಾ ಪಾರ್ಟಿಯಿಂದ ನಮ್ಮೆಲ್ಲರ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಜನ್ಮದಿನವನ್ನು ಸೇವೆ ಹಾಗೂ ಸಮರ್ಪಣಾ ಅಭಿಯಾನದ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ರಕ್ತದಾನ ಶಿಬಿರ, ಕೋವಿಡ್-19 ಲಸಿಕಾ ಕಾರ್ಯಕ್ರಮ, ಸಸಿ ನೆಡುವುದು, ಗೋಪೂಜೆ, ಗೋವುಗಳಿಗೆ ಮೇವು ವಿತರಣೆಯಂತಹ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಔರಾದ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಾರುತಿ ಚವ್ಹಾಣ್, ಅರಹಂತ ಸಾವಳೆ, ಕಿರಣ ಪಾಟೀಲ್, ವಸಂತ ಬಿರಾದಾರ, ಬಸವರಾಜ ಪಾಟೀಲ, ಸುರೇಶ ಭೋಸ್ಲೆ, ವೆಂಕಟರಾವ ಡೊಂಬಾಳೆ, ಉಮೇಶ ನಾಯಕ್, ವಿನಾಯಕ ಜಗದಾಳೆ, ಗಿರೀಶ ಒಡೆಯರ್, ಬಾಬುರಾವ್ ತೋರ್ಣಾವಾಡಿ, ಕುಶಾಲ ನಾಯಕ್, ಬಾಲಾಜಿ ನಾಯಕ್, ಗಣೇಶ ಕಾರ್ಯಗಾವೆ, ಬಂಟಿ ರಾಂಪೂರೆ, ರಮೇಶ ಗೌಡ ಹಾಗೂ ಇತರರು ಉಪಸ್ಥಿತರಿದ್ದರು. ಖಂಡೋಬಾ ಕಂಗಟೆ ನಿರೂಪಿಸಿದರು. ಹಣಮಂತ ಸುರನಾರ ವಂದಿಸಿದರು.
ವಿವಿಧೆಡೆ ಸಸಿ ನೆಡುವ ಕಾರ್ಯಕ್ರಮ: ಸೇವೆ ಹಾಗೂ ಸಮರ್ಪಣೆ ಅಭಿಯಾನದಡಿ ಕಮಲನಗರ ತಾಲ್ಲೂಕಿನ ಡೋಣಗಾಂವ್(ಎಂ) ಗ್ರಾಮದ ಮಾಳಪಯ್ಯಾ ದೇವಸ್ಥಾನದ ಆವರಣದಲ್ಲಿ 71 ಸಸಿಗಳನ್ನು ನೆಡಲಾಯಿತು. ಅದರಂತೆ ಏಕಂಬಾ, ಹುಲ್ಯಾಳ, ಬೋಂತಿ, ಹಂದಿಕೇರಾ ಸೇರಿದಂತೆ ಸುಮಾರು 71 ಬೂತ್ಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ನಿವೃತ್ತ ಯೋಧನಿಗೆ ಸನ್ಮಾನ: ಜಿಲ್ಲಾ ಉಸ್ತುವಾರಿ ಸಚಿವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಡೋಣಗಾಂವ್(ಎಮ್) ಗ್ರಾಮದ ಅವಿನಾಶ ಸೋಮುರೆ ಅವರನ್ನು ಸನ್ಮಾನಿಸಿ ಗೌರವಿಸಿದರು.
ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಪಣಕಿಟ್ಟು ಹೋರಾಡುವ ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರಧಾನಿಯವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿರುವ ಸೇವೆ ಹಾಗೂ ಸಮರ್ಪಣೆ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿಗಳನ್ನು ಸನ್ಮಾನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.