ಮೈಸೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ವಿಜಯನಗರ ವಾಟರ್ ಟ್ಯಾಂಕ್ ಸಮೀಪದಲ್ಲಿರುವ ಹೋಟೆಲ್ವೊಂದರ ಮೇಲೆ ದಾಳಿ ನಡೆಸಿದ ವಿಜಯ ನಗರ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಒಬ್ಬ ಅಪ್ರಾಪ್ತೆ ಸೇರಿದಂತೆ ಐವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ವಿಜಯನಗರ ವಾಟರ್ ಟ್ಯಾಂಕ್ ಸಮೀಪದಲ್ಲಿರುವ ಹೋಟೆಲ್ನಲ್ಲಿ ಅಪ್ರಾಪ್ತೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ವಿಜಯನಗರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿದರು. ಈ ವೇಳೆ ರಕ್ಷಿಸಿದ ಹೆಣ್ಣು ಮಕ್ಕಳಲ್ಲಿ ನಾಲ್ವರು ಬಾಂಗ್ಲಾದೇಶದವರಾಗಿದ್ದು, ಅವರಲ್ಲಿ ಒಬ್ಬರು ಅಪ್ರಾಪ್ತೆಯಾಗಿದ್ದಾಳೆ.
ಈ ಸಂಬಂಧ ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟಾನ್ಲಿ ಮಾತನಾಡಿ, ಈ ಲಾಡ್ಜ್ನಲ್ಲಿ ಮೊದಲಿನಿಂದಲೂ ವೇಶ್ಯಾವಾಟಿಕೆ ದಂದೆ ನಡೆಯುತ್ತಿದೆ ಎಂಬ ಮಾಹಿತಿ ಇದ್ದರೂ, ಏನೂ ಮಾಡಲು ಸಾಧ್ಯವಾಗಿರಲಿಲ್ಲ. ವಿಜಯನಗರ ಪೊಲೀಸ್ ಠಾಣೆಯ ಜಯಕುಮಾರ್ ಅವರ ಸಹಕಾರದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಹಿಂದೆಯೂ ಇಲ್ಲಿ ವೇಶ್ಯವಾಟಿಕೆ ನಡೆಸುತ್ತಿದ್ದಾರೆ ಎಂದು ಪೊಲೀಸರು ದಾಳಿ ಮಾಡಿದ್ದರು. ಆದರೂ ಮತ್ತೆ ಅವರು ದಂಧೆ ಮುಂದುವರೆಸಿದ್ದಾರೆ. ಹಾಗಾಗಿ ಹೋಟೆಲ್ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.