ಹೊಸ ದಿಗಂತ ವರದಿ, ಮೈಸೂರು:
ತಮ್ಮ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ನೊಂದ ಪ್ರೇಮಿಗಳು ಮೈಸೂರು ಜಿಲ್ಲೆಯ ನಂಜನಗೂಡು ಬಳಿಯ ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ತೆಪ್ಪ ನಡೆಸುವ ಅಂಬಿಗರು ರಕ್ಷಿಸಿರುವ ಘಟನೆ ನಡೆದಿದೆ.
ಚಾಮರಾಜನಗರದ 17 ವರ್ಷದ ಅಪ್ರಾಪ್ತೆ ಹಾಗೂ ಚಾಮರಾಜನಗರದ ಸೋಮವಾರಪೇಟೆ ಗ್ರಾಮದ ನಿವಾಸಿ ಅಭಿ (19) ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು. ಅಪ್ರಾಪ್ತೆ ಚಾಮರಾಜನಗರ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದು, ಅಭಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದಾನೆ.
ಇಬ್ಬರ ಪ್ರೀತಿ-ಪ್ರೇಮದ ವಿಚಾರ ತಿಳಿದ ಬಾಲಕಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದ್ದಾರೆ. ಇದೇ ವೇಳೆ ತೆಪ್ಪ ನಡೆಸುತ್ತಿದ್ದ ಅಂಬಿಗರು ಇಬ್ಬರನ್ನೂ ರಕ್ಷಿಸಿ, ಇಬ್ಬರಿಗೂ ನಂಜನಗೂಡು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.