ಹೊಸದಿಗಂತ ವರದಿ, ಬಾಗಲಕೋಟೆ:
ಕೆರೂರ ಘಟನೆ ಹಾಗೂ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಜು.11 ರಂದು ಬೆಳಗ್ಗೆ 10-30ಕ್ಕೆ ʼವಿರೋಧಿಗಳಿಗೆ ದಿಕ್ಕಾರ ಕೂಗಿ ಎಚ್ಚರಿಕೆ ಕೊಡುವʼ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಹೇಳಿದರು.
ನಗರದ ಚರಂತಿಮಠ ದ ಶಿವಾನುಭವ ಮಂಟಪದಲ್ಲಿ ಶುಕ್ರವಾರ ಹಿಂದೂ ಜಾಗರಣ ವೇದಿಕೆಯಿಂದ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಸಮಾಜದವರು ಪ್ರತಿಭಟನೆಯಲ್ಲಿ ಭಾಗವಹಿಸಿ ಹಿಂದೂಗಳ ಮೇಲಿನ ಹಲ್ಲೆಗೆ ಎಚ್ಚರಿಕೆ ಕೊಡಲು ಬನ್ನಿ ಎಂದರು. ನಮ್ಮವರ ಜೀವ ರಕ್ಷಣೆ ಮಾಡಿಕೊಳ್ಳಲು ನಾವು ಹೋರಾಟ ನಡೆಸಬೇಕಿದೆ. ಇದರ ಬಗ್ಗೆ ಗಂಭೀರ ಚಿಂತನೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅನ್ಯಾಯ ಸಹಿಸಿಕೊಂಡು ಬದುಕಲು ಇತಿಮಿತಿ ಇದೆ. ಹಿಂದೂ ಸಮಾಜದ ರಕ್ಷಣೆ ಆಗಬೇಕಿದೆ. ಧರ್ಮ, ದೇಶ ಉಳಿದರೆ ನಾವು ಉಳಿಯುತ್ತೇವೆ ಎಂದರು.
ಜಗತ್ತನ್ನೇ ಬದಲಾಯಿಸುವ ತಾಕತ್ತು ಹಿಂದೂ ಸಮಾಜಕ್ಕೆ ಇದೆ. ಮುಂದಿನ 30 ವರ್ಷಗಳ ನಂತರ ನಮ್ಮ ಮಕ್ಕಳು ಹೇಗೆ ಬದುಕಬೇಕು ಎಂಬುದು ಈಗಿನಿಂದಲೇ ನಿರ್ಧಾರವಾಗಬೇಕು ಎಂದು ಹೇಳಿದರು.
ಹಿಂದೂ ಜಾಗರಣ ವೇದಿಕೆಯ ಉತ್ತರ ಪ್ರಾಂತ ಉಪಾಧ್ಯಕ್ಷ ಕಿರಣ ಪವಾಡಶೆಟ್ಟರ, ಹಿಂದೂ ಜಾಗರಣ ವೇದಿಕೆಯ ಪ್ರಾಂತ ಅಧ್ಯಕ್ಷ ರಾಮಚಂದ್ರ ಮಟ್ಟಿ, ಜಿಲ್ಲಾಧ್ಯಕ್ಷ ಆನಂದ ಮುತ್ತಗಿ ವೇದಿಕೆಯಲ್ಲಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ