ಹೊಸದಿಗಂತ ವರದಿ, ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ದಿನೇ ದಿನೇ ರೋಚಕವಾದ ಸಂಗತಿ ಹೊರಬರುತ್ತಿದ್ದು, ಮಂಗಳವಾರ ಎನ್.ಸುನೀಲ್ ಕುಮಾರ್ ಎಂಬ ಆರೋಪಿಯನ್ನು ಸಿಐಡಿ ತಂಡದ ಪೋಲಿಸರು ಬಂಧನ ಮಾಡಿದ್ದಾರೆ.
ಒಟ್ಟಾರೆಯಾಗಿ ಪಿಎಸ್ಐ ನೇಮಕಾತಿ ಅಕ್ರಮದ ಜಾಡನ್ನು ಬೆನ್ನು ಹಿಡಿದ ಸಿಬಿಐ ತಂಡ ಇಲ್ಲಿಯವರೆಗೆ 16 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ನಿವಾಸಿಯಾಗಿರುವ ಎನ್.ಸುನೀಲಕುಮಾರ, ಪಿಎಸ್ಐ ನೇಮಕಾತಿ ಪರೀಕ್ಷೆಯ ಕೇಂದ್ರ ಸ್ಥಾನವಾದ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಸುನೀಲಕುಮಾರ ಪರೀಕ್ಷೆ ಬರೆದಿದ್ದಾರೆ ಎಂದು ಸಿಐಡಿ ಪೋಲಿಸರು ತಿಳಿಸಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣ ಬಳಸಿ ಪಾಸ ಆಗಿರುವ ಆರೋಪ ಇವರ ಮೇಲಿದೆ. ಹಗರಣದಲ್ಲಿ ದೊಡ್ಡ ಪಾತ್ರ ವಹಿಸಿದ ರುದ್ರಗೌಡ ಡಿ. ಪಾಟೀಲ ಮುಖಾಂತರವೇ ಸುನೀಲಕುಮಾರ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳ ಮರುಪರಿಶೀಲನೆ ಹಾಜರಾಗಲು ಸುನೀಲಕುಮಾರಗೆ ಬುಲಾವ್ ಬಂದಿತ್ತು. ಸೋಮವಾರ ಬೆಂಗಳೂರಿನ ಸಿಐಡಿ ಕಚೇರಿಗೆ ತೆರಳಿದ್ದರು. ಪರಿಶೀಲನೆ ವೇಳೆ ಅಕ್ರಮ ನಡೆದ ಸಂದೇಹ ಬಂದಿದ್ದು, ಆರೋಪಿಯನ್ನು ಅಧಿಕಾರಿಗಳು ಸ್ಥಳದಲ್ಲೇ ವಶಕ್ಕೆ ಪಡೆದರು.
ಸಿಐಡಿ ಅಧಿಕಾರಿಗಳ ತಂಡ ಮಂಗಳವಾರ ಅವರನ್ನು ಕಲಬುರಗಿಗೆ ಕರೆತಂದಿತು.
ಪಿಎಸ್ಐ ಅಕ್ರಮದ ಸೂತ್ರದಾರನಾದ ಆರೋಪಿ ರುದ್ರಗೌಡ, ಆರ್. ಡಿ. ಪಾಟೀಲಗೆ 40 ಲಕ್ಷ ಹಣ ನೀಡಿದ್ದ ಎಂಬ ಸಂಶಯ ಇದ್ದು, ವಿಚಾರಣೆ ಮುಂದುವರಿದಿದೆ.