ಹೊಸ ದಿಗಂತ ವರದಿ , ಮೈಸೂರು:
ಮುಂದಿನ 10-15 ದಿನಗಳಲ್ಲಿ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಲಾಗುವುದೆಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಪಿ.ಕಾಳಿಂಗರಾವ್ ಮಂಟಪದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂಬ ಬೇಡಿಕೆ ರೈತರು, ಸಹಕಾರಿಗಳಿಂದ ಇತ್ತು. ಇದಕ್ಕೆ ಸ್ಪಂದಿಸಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆಯನ್ನು ಮತ್ತೆ ಜಾರಿಗೆ ತರಲು ತೀರ್ಮಾನಿಸಿ, 300 ಕೋಟಿ ರೂಗಳ ಅನುದಾನವನ್ನು ನೀಡಿದ್ದಾರೆ. ಸಹಕಾರ ಇಲಾಖೆಯಿಂದ ನೂರು ಕೋಟಿರೂ ಶೇರು ಭರಿಸಿ, ಮುಂದಿನ 15 ದಿನದೊಳಗೆ ಯೋಜನೆಯನ್ನು ಜಾರಿಗೊಳಿಸಲಾಗುವುದೆಂದು ತಿಳಿಸಿದರು.
ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ನ್ನು ಸ್ಥಾಪಿಸಲು ತೀರ್ಮಾನಿಸಿ, ನೂರು ಕೋಟಿ ರೂ ಶೇರನ್ನು ಸರ್ಕಾರ ನೀಡಲು ನಿರ್ಧರಿಸಿದೆ. ಇದರಿಂದ 25 ಲಕ್ಷ ಮಂದಿ ಹಾಲು ಉತ್ಪಾದಕರಿಗೆ ಅನುಕೂಲ ವಾಗಲಿದೆ. ಇವರಿಗೆಲ್ಲಾ ಕ್ರೆಡಿಟ್ ಕಾರ್ಡ್ ನ್ನು ನೀಡಲಾಗುತ್ತದೆ ಎಂದು ಹೇಳಿದರು.