ಹೊಸದಿಗಂತ ಡಿಜಿಟಲ್ ಡೆಸ್ಕ್
ಹಿಂದೂ ದೇವಾಲಯಗಳನ್ನು ಉರುಳಿಸಿ ಕುತುಬ್ ಮಿನಾರ್ ಮತ್ತು ಪಕ್ಕದ ಮಸೀದಿಗಳನ್ನು ಕಟ್ಟಲಾಗಿದೆ. ಕುವ್ವಾತ್-ಉಲ್-ಇಸ್ಲಾಂ ಮಸೀದಿ ನಿರ್ಮಿಸಲು 27 ದೇವಾಲಯಗಳನ್ನು ಕೆಡವಲಾಯಿತು. ಇದಕ್ಕೆ ಸಾಕ್ಷಿ ಎನ್ನುವಂತೆ ಕುತುಬ್ ಮಿನಾರ್ ಬಳಿ ದೇವಾಲಯದ ಅವಶೇಷಗಳು ಪತ್ತೆಯಾಗಿದೆ ಎಂದು ಖ್ಯಾತ ಪುರಾತತ್ವಶಾಸ್ತ್ರಜ್ಞ ಕೆಕೆ ಮೊಹಮ್ಮದ್ ಹೇಳಿದ್ದಾರೆ.
ಏಪ್ರಿಲ್ 18 ರಂದು ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ವಿಶ್ವ ಪಾರಂಪರಿಕ ದಿನದ ಸಂವಾದದಲ್ಲಿ ಮಾತನಾಡಿರುವ ಅವರು “ಕುತುಬ್ ಮಿನಾರ್ ಕಟ್ಟಲು 27 ಹಿಂದೂ ಹಾಗೂ ಜೈನ ದೇವಾಲಯಗಳಿಂದ ಪಡೆದ ವಸ್ತುಗಳನ್ನು ಬಳಸಿಕೊಳ್ಳಲಾಯಿತು. ಈ ಕುರಿತು ದೆಹಲಿಯ ಪ್ರವಾಸೋದ್ಯಮ ವೆಬ್ ಸೈಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲು 27 ದೇವಾಲಯಗಳನ್ನು ನಾಶಪಡಿಸಲಾಗಿದೆ ಎಂದು ಹೇಳುವ ಅರೇಬಿಕ್ ಶಾಸನಗಳೂ ಲಭ್ಯವಿದೆ”
“ದೆಹಲಿಯು ಚೌಹಾಣರ ರಾಜಧಾನಿಯಾಗಿತ್ತು. ಮುಸ್ಲಿಂ ದಾಳಿಕೋರ ಕುತುಬ್-ಉದ್-ದಿನ್ ಐಬಕ್ ಪೃಥ್ವಿರಾಜ್ ಚೌಹಾಣನ ಮೇಲೆ ದಾಳಿಮಾಡಿ ಸೋಲಿಸಿದನು. ತದನಂತರದಲ್ಲಿ ಹಿಂದೂ ದೇವಾಲಯಗಳನ್ನು ನಾಶಪಡಿಸಿ ಅವುಗಳ ಮೇಲೆ ಮಸೀದಿ ಯನ್ನು ನಿರ್ಮಿಸಲಾಗಿದೆ. ಇದಕ್ಕೆ ಪುರಾವೆಯೆಂಬಂತೆ ಹಲವು ಗಣೇಶನ ವಿಗ್ರಹಗಳು ಸ್ಥಳದಲ್ಲಿ ಪತ್ತೆಯಾಗಿವೆ.”ಎಂದು ಹೇಳಿದ್ದಾರೆ.
ಇತ್ತೀಚೆಗೆ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರವು ಸ್ಥಳದಲ್ಲಿರುವ ಗಣೇಶನ ವಿಗ್ರಹಗಳನ್ನು ಸ್ಥಳಾಂತರ ಮಾಡುತ್ತಿದೆ ಎಂದು ವರದಿಯಾಗಿತ್ತು. ಆದರೆ ನ್ಯಾಯಾಲಯವು ಇದಕ್ಕೆ ತಡೆ ಆದೇಶ ನೀಡಿದ್ದು. ಮೇ.17 ರಿಂದ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಮೂರ್ತಿಗಳನ್ನು ಸ್ಥಳಾಂತರಿಸದಿರಲು ಕೋರ್ಟ್ ಸೂಚಿಸಿದೆ.