ಹೊಸದಿಗಂತ ವರದಿ, ಮಂಡ್ಯ:
ಜಿಲ್ಲೆಯ ಆರ್ಥಿಕ ಜೀವನಾಡಿಯಾದ ಮೈಷುಗರ್ ಕಾರ್ಖಾನೆಯನ್ನು ಮುಂದಿನ ಹಂಗಾಮಿನಲ್ಲಿ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು, ಕಾರ್ಖಾನೆ ದುರಸ್ಥಿ ಮತ್ತು ಚಾಲನೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಖಚಿತ ಭರವಸೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರಗತಿಪರ ಸಂಘಟನೆಗಳ ಸಭೆಯಲ್ಲಿ ಮೈಷುಗರ್ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರ ಮೊಬೈಲ್ಗೆ ಕರೆ ಮಾಡಿದ ಸಕ್ಕರೆ ಸಚಿವರು, ಮೈಷುಗರ್ ಕಾರ್ಖಾನೆ ದುರಸ್ಥಿ ಹಾಗೂ ಚಾಲನೆ ಕುರಿತಂತೆ ಈಗಾಗಲೇ ಬಜೆಟ್ ಪೂರ್ವಭಾವಿ ಸಭೆಯಲ್ಲಿ ೨೨೪ ಕೋಟಿ ರೂ. ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಅಂತಿಮ ಅಂತಹ ಒಪ್ಪಿಗೆ ಪಡೆಯಲಾಗಿದೆ. ಮಾತ್ರವಲ್ಲ, ಬಜೆಟ್ನಲ್ಲಿ ೨೨೪ ಕೋಟಿ ರೂ.ಗಳನ್ನು ಒದಗಿಸಲು ಸ್ವತಃ ಮುಖ್ಯಮಂತ್ರಿಗಳು ಕೂಡ ಒಪ್ಪಿದ್ದಾರೆ ಹಾಗಾಗಿ ಕಾರ್ಖಾನೆ ಆರಂಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದರು.