ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢ ಆಗ್ನೇಯ ಕೇಂದ್ರ ರೈಲ್ವೆಯ ರಾಯಪುರ ವಿಭಾಗವು ಕೇವಲ 10 ತಿಂಗಳ ಹೆಣ್ಣು ಮಗುವಿಗೆ ಉದ್ಯೋಗ ನೀಡಿದ್ದು, ರೈಲ್ವೇ ಇತಿಹಾಸದಲ್ಲಿಯೇ ಇಂದೊಂದು ಅತ್ಯಂತ ಕುತೂಹಲಕಾರಿ ವಿದ್ಯಮಾನ.
ಹೌದು , ರಾಧಿಕಾ ಎಂಬ ಹೆಣ್ಣು ಮಗುವಿಗೆ ರೈಲ್ವೇ ಇಲಾಖೆ ಈ ಊಡುಗರೆ ನೀಡಿದ್ದು, 18 ವರ್ಷ ತುಂಬಿದ ನಂತರ ಕೆಲಸಕ್ಕೆ ಹಾಜರಾಗುತ್ತಾಳೆ.
ನೌಕರಿ ನೀಡಿದ್ದೇಕೆ?:
ರಾಧಿಕಾಳ ತಂದೆ ರಾಜೇಂದ್ರ ಕುಮಾರ್ ಯಾದವ್ ಅವರು ಭಿಲಾಯ್ನ ಪಿಪಿ ಯಾರ್ಡ್ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಮಂದಿರ್ ಹಸೌದ್ನ ಚಾರೋಡದ ರೈಲ್ವೇ ಮನೆಯಲ್ಲಿ ಕುಟುಂಬ ವಾಸವಾಗಿತ್ತು. ಜೂನ್ 1ರಂದು ರಾಜೇಂದ್ರ ಕುಮಾರ್ ಮತ್ತು ಅವರ ಪತ್ನಿ ಮಂಜು ಯಾದವ್ ತಮ್ಮ ಮಗುವಿನ ಜೊತೆ ಮಂದಿರ ಹಸೌದ್ನಿಂದ ಭಿಲಾಯ್ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ಸಂದರ್ಭದಲ್ಲಿ ಮಗು ರಾಧಿಕಾ ಅಚ್ಚರಿ ರೀತಿಯಲ್ಲಿ ಬದುಕುಳಿದಿದ್ದಳು. ತಂದೆ-ತಾಯಿಯ ಸಾವಿನ ನಂತರ ರಾಧಿಕಾಳನ್ನು ಅಜ್ಜಿಯೇ ಪಾಲನೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಗುವಿಗೆ 18 ವರ್ಷ ತುಂಬಿದ ಬಳಿಕ ಅನುಕಂಪದ ಆಧಾರದ ಮೇಲೆ ಇಲಾಖೆಯಲ್ಲಿ ಕೆಲಸ ನೀಡಲಾಗುವುದು. ಇದಕ್ಕಾಗಿ ಮಗುವಿನ ದಾಖಲಾತಿ ಪ್ರಕ್ರಿಯೆ ರೈಲ್ವೇ ಇಲಾಖೆಯಿಂದ ನಡೆದಿದೆ. ಈ ಸಂದರ್ಭದಲ್ಲಿ ಹಿರಿಯ ವಿಭಾಗೀಯ ಸಿಬ್ಬಂದಿ ಉದಯ್ ಕುಮಾರ್ ಭಾರ್ತಿ ಮಗುವಿನ ಹೆಬ್ಬೆರಳ ಗುರುತು ಪಡೆಯುವ ಮೂಲಕ ಸಹಿ ಹಾಕಿಸಿಕೊಂಡರು.