ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಒಸಾಮಾ ಬಿನ್ ಲಾಡೆನ್ನಂತೆ ಗಡ್ಡವನ್ನು ಬೆಳೆಸುತ್ತಾರೆ ಮತ್ತು ಅವರು ಪ್ರಧಾನಿ ನರೇಂದ್ರ ಮೋದಿಯಂತೆ ಆಗುತ್ತಾರೆ ಎಂದು ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಬಿಹಾರ ಘಟಕದ ಅಧ್ಯಕ್ಷ ಸಾಮ್ರಾಟ್ ಚೌಧರಿ ಹೇಳಿದರು.
ಈ ಮೂಲಕ ರಾಹುಲ್ ಗಾಂಧಿಯನ್ನು ಹತ್ಯೆಯಾದ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ಗೆ ಹೋಲಿಸಿದ್ದಾರೆ, ಕೇವಲ ಗಡ್ಡವನ್ನು ಬೆಳೆಸುವುದರಿಂದ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಗಡ್ಡವನ್ನು ಬಿಟ್ಟು, ಎಲ್ಲರ ಮುಂದೆ ಪ್ರದರ್ಶನ ಮಾಡಿದ್ದಾರೆ. ರ್ಯಾಲಿ ಮುಗಿದ ನಂತರ ಗಡ್ಡ ಕತ್ತರಿಸಿದ್ದಾರೆ ಎಂದು ಸಾಮ್ರಾಟ್ ಚೌಧರಿಯವರ ಟೀಕಿಸಿದ್ದಾರೆ.
ಇದೇ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧವೂ ಸಾಮ್ರಾಟ್ ಚೌಧರಿ ವಾಗ್ದಾಳಿ ನಡೆಸಿದ್ದು, ‘ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೇಶದ ಉದ್ದಗಲಕ್ಕೂ ಪ್ರಯಾಣ ಮಾಡುತ್ತಿದ್ದಾರೆ. ಹೋದಲ್ಲೆಲ್ಲ ತಾನೇ ಮುಂದಿನ ಪ್ರಧಾನಿ ಎಂದು ಹೇಳಿಕೊಳ್ಳುತ್ತಿದ್ದಾರೆ. ನಿತೀಶ್ ಕುಮಾರ್ ಪ್ರಧಾನಮಂತ್ರಿ ಹೌದಾ?, ಅವರು ತಮ್ಮ ಮಾನಸಿಕ ಸಮತೋಲನ ಕಳೆದುಕೊಂಡಂತೆ ಕಾಣುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.