ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ಭಾರತೀಯ ಸಮುದಾಯ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ʻಬಿಜೆಪಿ ಮತ್ತು ಆರ್ಎಸ್ಎಸ್ಗೆ ಭವಿಷ್ಯವನ್ನು ನೋಡುವ ಸಾಮರ್ಥ್ಯವಿಲ್ಲ. ಬದಲಿಗೆ ಬಿಜೆಪಿ, ಆರ್ಎಸ್ಎಸ್ ದೇಶದಲ್ಲಿ ದ್ವೇಷವನ್ನು ಪ್ರಚೋದಿಸುತ್ತಿದೆʼ ಎಂದು ಆರೋಪಿಸಿದರು. ʻಭಾರತದಲ್ಲಿ ಎರಡು ಸಿದ್ಧಾಂತಗಳ ನಡುವೆ ಹೋರಾಟ ನಡೆಯುತ್ತಿದೆ. ಒಂದು ನಾವು (ಕಾಂಗ್ರೆಸ್) ಪ್ರತಿನಿಧಿಸಿದರೆ, ಇನ್ನೊಂದು ಬಿಜೆಪಿ-ಆರ್ಎಸ್ಎಸ್ ಸಿದ್ಧಾಂತ. ಅಂದರೆ, ಎಲ್ಲರಿಗೂ ಅರ್ಥವಾಗುವ ಹಾಗೆ ಹೇಳೋದಾದರೆ ಒಂದು ಕಡೆ ಮಹಾತ್ಮ ಗಾಂಧಿ ಮತ್ತೊಂದೆಡೆ ನಾಥೂರಾಂ ಗೋಡ್ಸೆʼ ಎಂದರು.
ಬಿಜೆಪಿ-ಆರ್ಎಸ್ಎಸ್ನ ಕೆಲಸ ದೇಶದಲ್ಲಿ ದ್ವೇಷ ಹರಡುವುದು, ಆದರೆ ಕಾಂಗ್ರೆಸ್ ದೇಶದ ಎಲ್ಲ ಜನರಿಗೆ ಪ್ರೀತಿಯನ್ನು ಹರಡುವುದು. ಬಿಜೆಪಿ ಯಾವಾಗಲೂ ಭೂತಕಾಲದ ಬಗ್ಗೆಯೇ ಮಾತನಾಡುತ್ತದೆಯೇ ಹೊರತು ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ ಎಂದು ಟೀಕಿಸಿದರು.
ಒಡಿಶಾ ರೈಲು ಅಪಘಾತದ ಬಗ್ಗೆ ಕೇಂದ್ರ ಸರ್ಕಾರವನ್ನು ಕೇಳಿದರೆ 50 ವರ್ಷಗಳ ಹಿಂದೆ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ ಅದು ಅವರ ಸಿದ್ಧಾಂತ. ತಪ್ಪು ಮುಚ್ಚಿಹಾಕಲು ಹಿಂದಿನದನ್ನು ಬಳಸಿಕೊಂಡು ಭವಿಷ್ಯದಲ್ಲಿ ತಪ್ಪು ಮರುಕಳಿಸದಂತೆ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳತ್ತ ಬಿಜೆಪಿ ಗಮನಹರಿಸಿಲ್ಲ ಎಂದು ರಾಹುಲ್ ಟೀಕಿಸಿದರು.