ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಡು ಕೇಳರಿಯದ ವರುಣಾರ್ಭಟಕ್ಕೆ ಕೇರಳ ಸಾಕ್ಷಿಯಾಗುತ್ತಿದ್ದು, ತ್ರಿಶೂರ್ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಮನೆ, ಕಾಲೋನಿ, ಕಟ್ಟಡ ಎನ್ನದೆ ಎಲ್ಲೆಂದರಲ್ಲಿ ಮಳೆ ನೀರು ನುಗ್ಗಿ ಬರುತ್ತಿದ್ದು, ಬದುಕು ಅಸಹನೀಯವಾಗಿದೆ.
ಸಂತ್ರಸ್ತರಿಗಾಗಿ ನಾಟಿಕ ಎಸ್ಎನ್ ಟ್ರಸ್ಟ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪರಿಹಾರ ಶಿಬಿರ ಆರಂಭಿಸಲಾಗಿದೆ. ಈ ಶಿಬಿರದಲ್ಲಿ 19 ಕುಟುಂಬಗಳ 48 ಮಂದಿಗೆ ಆಸರೆ ನೀಡಲಾಗಿದೆ. ಇಲ್ಲಿನ ನಾಟಿಕ ಪಂಚಾಯತ್, ತಿರುನಿಲಂ ಕಾಲೋನಿ, ವೆಲ್ಲಂಚೇರಿ ದೇವಸ್ಥಾನದ ಆವರಣ ಮತ್ತು ತ್ರಿಪ್ರಯಾರ್ ಜಂಕ್ಷನ್ನ ಪಶ್ಚಿಮ ಭಾಗದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಸಂಕಷ್ಟ ಸೃಷ್ಟಿಸಿದೆ. ತಾಳಿಕುಳಂ, ವಾಟನಪಿಲ್ಲಿ ಮತ್ತು ಎಂಗಂಡಿಯೂರು ಗ್ರಾಮ ಪಂಚಾಯಿತಿಗಳ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಎಲ್ಲೆಡೆ ಆಡಳಿತಗಳು ವ್ಯಾಪಕ ಮುನ್ನಚ್ಚರಿಕಾ ಕ್ರಮ ಕೈಗೊಂಡಿವೆ.