ಹೊಸ ದಿಗಂತ ವರದಿ, ಗದಗ:
ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಠಿಯಾಗಿದ್ದು, ಮಳೆಯ ನೀರಿನಲ್ಲಿ ಹಳ್ಳ ದಾಟುವಾಗ ಬೈಕ್ ಸಮೇತ ನೀರಿನಲ್ಲಿ ಯುವಕನೋರ್ವ ಕೊಚ್ಚಿಕೊಂಡು ಹೋಗಿರುವ ಘಟನೆ ಮುಂಡರಗಿಯಲ್ಲಿ ಶುಕ್ರವಾರ ನಡೆದಿದೆ.
ಮುಂಡರಗಿ ತಾಲ್ಲೂಕಿನ ಯಕ್ಲಾಸಪೂರ ಗ್ರಾಮದ ಟಿಪ್ಪುಸುಲ್ತಾನ (26)ಎಂಬುವರು ಮೃತ ದುರ್ದೈವಿಯಾಗಿದ್ದು ಸಮೀಪದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಗುರುವಾರ ಕನ್ಯೆ(ಹುಡುಗಿಯನ್ನು) ನೋಡಿಕೊಂಡು ಮರಳಿ ಊರಿಗೆ ಬರುವಾಗ ಸಂಜೆಯಾಗಿದ್ದು ಮುಂಡರಗಿ ವರೆಗೆ ಬಂದು ತಂದೆಗೆ ಪೋನ್ ಮಾಡಿ ಮಳೆಯ ಬಗ್ಗೆ ವಿಚಾರಿಸಿದಾಗ ತಂದೆಯು ಇಲ್ಲಿ ತುಂಬಾ ಮಳೆ ಬರುತ್ತಿದೆ ಮುಂಡರಗಿಯಲ್ಲಿ ಇದ್ದು ನಾಳೆ ಬಾ ಎಂದು ಹೇಳಿದ್ದಾರೆ. ಆದರೆ ನಂತರ ಮಳೆಯಲ್ಲಿಯೇ ಹೊರಟು ನಿಂತು ಯಕ್ಲಾಪೂರ ಸಮೀಪದ ಕೋತಿಹಳ್ಳವನ್ನು ದಾಟಲು ದುಸ್ಸಾಸಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ ಮಳೆಯ ನೀರನ ರಭಸಕ್ಕೆ ಬೈಕ್ನೊಂದಿಗೆ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾನೆ. ನಂತರ ಹಳ್ಳದ ದಂಡೆಯಲ್ಲಿ ಮುಳ್ಳಿನ ಕಂಠೆಯಲ್ಲಿ ಸಿಲುಕಿರುವ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.