ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ ರಾಜ ಚೋಳನ್ ಹಿಂದೂ ರಾಜನಲ್ಲ ಎನ್ನುವ ಮೂಲಕ ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿಮಾರನ್ ವಿವಾದ ಸೃಷ್ಟಿಸಿದ್ದಾರೆ.
“ನಿರಂತರವಾಗಿ, ನಮ್ಮ ಚಿಹ್ನೆಗಳನ್ನು ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ. ವಳ್ಳುವರನ್ನು ಕೇಸರಿಕರಣ ಮಾಡುವುದು ಅಥವಾ ರಾಜ ರಾಜ ಚೋಳನ್ ಅವರನ್ನು ಹಿಂದೂ ರಾಜ ಎಂದು ಕರೆಯುವುದು ನಿರಂತರವಾಗಿ ನಡೆಯುತ್ತಿದೆ” ಎಂದು ತಮಿಳು ಚಲನಚಿತ್ರ ನಿರ್ದೇಶಕ ವೆಟ್ರಿಮಾರನ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಸಿನಿಮಾ ಸಾಮಾನ್ಯ ಮಾಧ್ಯಮವಾಗಿರುವುದರಿಂದ ಪ್ರಾತಿನಿಧ್ಯವನ್ನು ರಕ್ಷಿಸಿಕೊಳ್ಳಲು ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ವೆಟ್ರಿಮಾರನ್ ಎಚ್ಚರಿಸಿದ್ದಾರೆ.
ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರ ಬಹು ನಿರೀಕ್ಷಿತ ಚಲನಚಿತ್ರ ಪೊನ್ನಿಯಿನ್ ಸೆಲ್ವನ್: 1 ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವೆಟ್ರಿಮಾರನ್ ಅವರ ಹೇಳಿಕೆಗಳು ಬಂದಿವೆ. ಈ ಚಲನಚಿತ್ರವು ರಾಜ ರಾಜ ಚೋಳನ್ನಿಂದ ಪ್ರೇರಿತವಾದ ಕಲ್ಕಿಯವರ ಕಾಲ್ಪನಿಕ ಕಾದಂಬರಿಯನ್ನು ಆಧರಿಸಿದೆ ಎನ್ನಲಾಗಿದೆ.
ವೆಟ್ರಿಮಾರನ್ ಅವರ ಹೇಳಿಕೆಗೆ ಬಿಜೆಪಿ ನಾಯಕ ಎಚ್ ರಾಜಾ ತಿರುಗೇಟು ನೀಡಿದ್ದು, ರಾಜ ರಾಜ ಚೋಳನ್ ಹಿಂದೂ ರಾಜನೇ ಆಗಿದ್ದ ಎಂದು ಹೇಳಿದ್ದಾರೆ. “ನಾನು ವೆಟ್ರಿಮಾರನ್ ಅವರಂತೆ ಇತಿಹಾಸವನ್ನು ಚೆನ್ನಾಗಿ ತಿಳಿದಿಲ್ಲ, ಆದರೆ ಅವರು ರಾಜ ರಾಜ ಚೋಳನ್ ನಿರ್ಮಿಸಿದ ಎರಡು ಚರ್ಚ್ ಮತ್ತು ಮಸೀದಿಗಳನ್ನು ಸೂಚಿಸಲಿ. ಅವರು ತಮ್ಮನ್ನು ಶಿವಪಾದ ಶೇಖರನ್ ಎಂದು ಕರೆದುಕೊಂಡಿದ್ದರು. ಆಗ ಆತ ಹಿಂದೂ ಅಲ್ಲವೇ?’’ ಎಂದು ಎಚ್ ರಾಜಾ ಪ್ರಶ್ನಿಸಿದ್ದಾರೆ.
ವೆಟ್ರಿಮಾರನ್ ಅವರ ಹೇಳಿಕೆಗೆ ಬಿಜೆಪಿ ನಾಯಕ ಹೆಚ್ ರಾಜಾ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ವೆಟ್ರಿಮಾರನ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
“ರಾಜ ರಾಜ ಚೋಳನ ಕಾಲದಲ್ಲಿ ‘ಹಿಂದೂ ಧರ್ಮ’ ಎಂಬ ಹೆಸರಿರಲಿಲ್ಲ. ವೈನವಂ, ಶಿವಂ ಮತ್ತು ಸಮಾನಂಗಳಿದ್ದವು ಮತ್ತು ಬ್ರಿಟಿಷರೇ ‘ಹಿಂದೂ’ ಎಂಬ ಪದವನ್ನು ಸೃಷ್ಟಿಸಿದರು. ಅವರಿಗೆ ಏನು ಹೇಳಬೇಕೆಂದು ತಿಳಿಯದ ಕಾರಣ, ಅವರು ತುತ್ತುಕುಡಿಯನ್ನು ಟುಟಿಕೋರಿನ್ ಆಗಿ ಬದಲಾಯಿಸಿದರು, ”ಎಂದು ಮಕ್ಕಳ್ ನೀತಿ ಮೈಯಂ ಪಕ್ಷದ ನಾಯಕ ಕಮಲ್ ಹಾಸನ್ ಹೇಳಿದ್ದಾರೆ.