ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜಸ್ಥಾನದ ಉದಯ್ಪುರ ಜಿಲ್ಲೆಯಲ್ಲಿ ಜೀಪ್ ಒಂದು ಆಳವಾದ ಕಮರಿಗೆ ಉರುಳಿದ ಪರಿಣಾಮ ಐವರು ಮೃತಪಟ್ಟು 13 ಮಂದಿ ಗಾಯಗೊಂಡಿದ್ದಾರೆ.
ನಯಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದೇಶ್ವರ ಮಹದೇವ್ ದೇವಾಲಯದ ಬಳಿ ಕಳೆದ ರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ. ಓವರ್ ಲೋಡ್ ತುಂಬಿಕೊಂಡು ಸಾಗುತ್ತಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದೆ. ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಚೌಧರಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ. ಉದಯಪುರದಲ್ಲಿ ಸಂಭವಿಸಿದ ಅಪಘಾತ ಅತ್ಯಂತ ದುರಾದೃಷ್ಟಕರವಾದದ್ದಾಗಿದೆ. ಐವರು ಸಾವನ್ನಪ್ಪಿರುವುದು ಅತ್ಯಂತ ನೋವನ್ನುಂಟು ಮಾಡಿದೆ. ಈ ಸಂಕಷ್ಟದ ಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ದೇವರು ಮೃತರ ಕುಟುಂಬಸ್ಥರಿಗೆ ನೀಡಲಿ, ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ