ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭಾ ಚುನಾವಣೆಯು ಇಂದು ಮುಂಜಾನೆಯಿಂದ ನಡೆಯುತ್ತಿದ್ದು ಮತ ಚಲಾವಣೆ ವೇಳೆ ಜೆಡಿಎಸ್ನ ಹೆಚ್.ಡಿ. ರೇವಣ್ಣ ಚುನಾವಣಾ ನಿಯಮ ಉಲ್ಲಂಘಿಸಿದ್ದು ಅವರ ಮತವನ್ನು ಅಸಿಂಧು ಗೊಳಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಮತ ಚಲಾಯಿಸಿದ ನಂತರ ಹೆಚ್.ಡಿ. ರೇವಣ್ಣ ತಮ್ಮ ಮತಪತ್ರವನ್ನು ಡಿಕೆಶಿಯವರಿಗೆ ತೋರಿಸಿದ್ದಾರೆ. ಇದು ಚುನಾವಣಾ ನಿಯಮದ ಉಲ್ಲಂಘನೆ ಆದ್ದರಿಂದ ಅವರ ಮತವನ್ನು ಅಸಿಂಧುಗೊಳಿಸಬೇಕೆಂದು ಬಿಜೆಪಿಯು ಆರೋಪಿಸಿದ್ದು ಸರ್ಕಾರದ ಮುಖ್ಯ ಸಚೇತಕರು ಈ ಕುರಿತು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಇದರ ನಡುವೆ ಮಾಜಿ ಸಿಎಂ ಹೆಚ್.ಡಿ ಕುಮಾರ ಸ್ವಾಮಿಯವರು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು “ಸಿದ್ಧರಾಮಯ್ಯ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅಡ್ಡ ಮತ ಹಾಕಿಸಿ ಮೂರನೇ ಅಭ್ಯರ್ಥಿಯ ಗೆಲುವಿಗೆ ಕಾರಣವಾಗುತ್ತಿದ್ದಾರೆ. ಇದು ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಟ್ಟಂತೆ” ಎಂದು ಹೇಳಿದ್ದಾರೆ.
ಇಲ್ಲಿಯವರೆಗೂ ಬಿಜೆಪಿಯ 75, ಕಾಂಗ್ರೆಸ್ ನ 23, ಹಾಗೂ ಜೆಡಿಎಸ್ನ 7 ಶಾಸಕರು ಸೇರಿದಂತೆ ಒಟ್ಟೂ 105 ಶಾಸಕರು ಮತದಾನ ಮಾಡಿದ್ದಾರೆ. ಅಪರಾಹ್ನ4 ಗಂಟೆಯವರೆಗೂ ಮತದಾನ ಪ್ರಕ್ರಿಯೆ ಮುಂದುವರೆಯಲಿದೆ.